ಹೊಸದಿಗಂತ ವರದಿ, ಶ್ರೀರಂಗಪಟ್ಟಣ :
ಜಮೀನು ಮಾರಾಟದ ಹಣ ಹಂಚಿಕೆ ವಿವಾದ, ಮಕ್ಕಳಿಂದಲೇ ಮಾರಕಾಸ್ತ್ರದಿಂದ ಹಲ್ಲೆಗೊಳಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ತಾಲೂಕು ಕೆರೆಮೇಗಳಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮರಿಕಾಳಯ್ಯ (60) ಹತ್ಯೆಯಾದವರು. ಇವರ ಮಕ್ಕಳಾದ ಶಶಿಕುಮಾರ್, ರಾಜೇಶ್ ತಂದೆಯನ್ನೇ ಕೊಲೆ ಮಾಡಿರುವ ಆರೋಪಿಗಳು.
ಘಟನೆ ವಿವರ : ಮರಿಕಾಳಯ್ಯನಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಜಮೀನಿನ ಪೈಕಿ 1 ಎಕರೆಯನ್ನು 30 ಲಕ್ಷ ರು.ಗೆ ಮಾರಾಟ ಮಾಡಿದ್ದರು. ಆಗ ತಂದೆಗೆ 10 ಲಕ್ಷ, ಇಬ್ಬರು ಪುತ್ರಿಗೆ ತಲಾ 10 ಲಕ್ಷ ಇಟ್ಟುಕೊಳ್ಳುವಂತೆ ಒಪ್ಪಂದವಾಗಿತ್ತು. ಹಣ ಕೊಟ್ಟರೆ ಮಾತ್ರ ಸಹಿ ಹಾಕುವುದಾಗಿ ಮರಿಕಾಳಯ್ಯ ಜಮೀನು ಮಾರಾಟದ ವೇಳೆ ಮಕ್ಕಳಿಗೆ ಹೇಳಿದ್ದರು. ಹಣ ಕೈಗೆ ಕೊಡದ ಕಾರಣ ಶ್ರೀರಂಗಪಟ್ಟಣ ಸಬ್ ರಿಜಿಸ್ಟರ್ ಆಫೀಸ್ ನಿಂದ ಸ್ವಗ್ರಾಮಕ್ಕೆ ಹಿಂದುರುಗಿದ್ದ ಮರಿಕಾಳಯ್ಯ ಮುನ್ನೆಚ್ಚರಿಕೆಯಾಗಿ ಅರಕರ ಪೊಲೀಸ್ ಠಾಣೆಗೆ ನನಗೆ ಜೀವ ಬೆದರಿಕೆ ಇದೆ ಎಂದು ದೂರು ನೀಡಿದ್ದರು.
ಈ ಮಧ್ಯೆ ದೂರು ನೀಡಿದ ದಿನವೇ ಸ್ವಗ್ರಾಮಕ್ಕೆ ಬಂದ ಮಕ್ಕಳಿಬ್ಬರು ಚಾಕುವಿನಿಂದ ತಂದೆಗೆ ಇರಿದು ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿದ್ದ ಮಂಕಾಳಯ್ಯನನ್ನು ತಡರಾತ್ರಿಯಲ್ಲಿ ಚಿಕಿತ್ಸೆಗಾಗಿ ಗ್ರಾಮಸ್ಥರು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮರಿಕಾಳಯ್ಯ ಮೃತಪಟ್ಟಿದ್ದರು. ಹಣಕ್ಕಾಗಿ ಮಕ್ಕಳೇ ಹೆತ್ತ ತಂದೆಯನ್ನು ಕೊಲೆ ಮಾಡಿರುವುದಕ್ಕೆ ಇಡೀ ಗ್ರಾಮದ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಸಬಂಧ ಅರಕೆರೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕೊಲೆ ಕೇಸು ದಾಖಲಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.