ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮೇಲೆ ದಾಳಿಗೆ ಬಾಂಗ್ಲಾದೇಶದಿಂದ ಸಂಚು ರೂಪಿಸುತ್ತಿದ್ದ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ್ದ ಉಗ್ರನನ್ನು ದೆಹಲಿ ಪೊಲೀಸರು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಶಬ್ಬೀರ್ ಅಹ್ಮದ್ ಲೋನ್ ಅಲಿಯಾಸ್ ರಾಜಾ ಅಲಿಯಾಸ್ ಕಾಶ್ಮೀರಿ ಎಂದು ಗುರುತಿಸಲಾಗಿದ್ದು, ಈತ ಭಾರತ ಮೇಲೆ ದಾಳಿ ನಡೆಸಲು ಸಂಚು ರೂಪಿಸವಲ್ಲಿ ಪ್ರಮುಖ ಪಾತ್ರ ವಹಿಸಿದ್ದನು ಎಂದು ದೆಹಲಿ ಪೊಲೀಸರ ವಿಶೇಷ ದಳ ಪತ್ತೆ ಹಚ್ಚಿದ್ದಾರೆ.
ಈತ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಜಿಲ್ಲೆಯ ಕಂಗನ್ ನಿವಾಸಿಯಾಗಿದ್ದು, ಆದರೆ ಹೆಚ್ಚಿನ ಸಮಯ ಬಾಂಗ್ಲಾದಲ್ಲಿ ನೆಲೆಸಿಕೊಂಡು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ನಿರ್ದೇಶನದ ಮೇರೆಗೆ ಲಷ್ಕರ್ ಸಂಘಟನೆಯ ಪರವಾಗಿ ಭಾರತ ವಿರೋಧಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದನು.
ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಲಷ್ಕರ್ ಸಂಬಂಧಿತ ಭಯೋತ್ಪಾದಕ ಮಾಡ್ಯೂಲ್ ಅನ್ನು ಭದ್ರತಾ ಸಂಸ್ಥೆಗಳು ಪತ್ತೆಹಚ್ಚಿದ ಕೆಲವೇ ದಿನಗಳಲ್ಲಿ ಈತನ ಬಂಧನವಾಗಿದ್ದು, ದೊಡ್ಡ ಭಯೋತ್ಪಾದಕ ದಾಳಿಯನ್ನೇ ತಪ್ಪಿಸಿದೆ.
ಸದ್ಯ ಪೋಲೀಸರ ವಶದಲ್ಲಿರುವ ಈತನ ಬಳಿಯಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ತನಿಖಾ ಸಂಸ್ಥೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.



