ಹೊಸ ದಿಗಂತ ವರದಿ, ಹುಬ್ಬಳ್ಳಿ:
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿದ ಕಾರಣಕ್ಕೆ ಹಳೆ ಹುಬ್ಬಳ್ಳಿ ಗಲಭೆ ವಿಕೋಪಕ್ಕೆ ಹೋಗಿಲ್ಲ. ಬಹುಶಃ ನಿರ್ವಹಣೆ ಮಾಡದಿದ್ದರೆ ಇಡೀ ಹುಬ್ಬಳ್ಳಿ ಹೊತ್ತಿ ಉರಿಯುತ್ತಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹಳ ಜನರ ಆಕ್ರೋಶವಿದೆ. ಗಲಭೆ ಬೆಂಕಿ ಹಚ್ಚಿದವರ ನಾಲ್ಕು ತಲೆಗಳು ಉರುಳಿದ್ದರೆ ಹುಬ್ಬಳ್ಳಿ 50 ವರ್ಷಗಳ ಕಾಲ ಶಾಂತವಾಗಿರುತ್ತಿತ್ತು ಎಂದು ಬಹಳ ಜನ ಹೇಳ್ತಿದ್ದಾರೆ ಎಂದರು.
ಕಾನೂನು ಮೇಲೆ ನಂಬಿಕೆ ಇಲ್ಲದವರು ಗಲಭೆ ಪ್ರಚೋದನೆ ನೀಡಿದರು. ಅವರ ಕ್ರಿಯೆಗೆಲ್ಲ ಹಿಂದೂ ಸಮಾಜವೂ ಪ್ರತಿಕ್ರಿಯೆ ವ್ಯಕ್ತಪಡಿಸಿದರೆ ಏನೆಲ್ಲಾ ಆಗಿಬಿಡುತ್ತಿತ್ತು. ಮತಕ್ಕಾಗಿ ಮತಾಂಧತೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತದೆ ಎಂದು ಹೇಳಿದರು.
ಜಮೀರ್ ಅಹ್ಮದ್ ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆಯಾದಾಗ ಮತ್ತು ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಾಟೆಯಾದಾಗ ಇವರು ಸಪೋರ್ಟ್ ಮಾಡಿದ್ದರು. ಅಮಾಯಕರು ಎಂದು ಸರ್ಟಿಫಿಕೇಟ್ ಸಹ ಕೊಟ್ಟರು. ತಮ್ಮದೆ ಶಾಸಕರ ಮನೆ ಮೇಲೆ ಬೆಂಕಿ ಹಾಕಿದಾಗಲೂ ಅದು ಅಪಮಾನ ಎಂದು ಭಾವಿಸಲಿಲ್ಲ ಎಂದರು.