ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರವಿಂದ್ ಕೇಜ್ರಿವಾಲ್ರ ಬಂಧನ ವಿರೋಧಿಸಿದ ಆಮ್ ಆದ್ಮಿ ಪಕ್ಷದ ಕಾನೂನು ಘಟಕಕ್ಕೆ ದೆಹಲಿ ಹೈಕೋರ್ಟ್ ಬುಧವಾರ ಕಠಿಣ ಎಚ್ಚರಿಕೆ ನೀಡಿದೆ.
ಮಾರ್ಚ್ 27 ರಂದು (ಇಂದು) ರಾಷ್ಟ್ರ ರಾಜಧಾನಿಯ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರತಿಭಟನೆಗೆ ಆಮ್ ಆದ್ಮಿ ಪಾರ್ಟಿಯ ಲೀಗಲ್ ಸೆಲ್ ಕರೆ ನೀಡಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್ ಹಾಗೇನಾದರೂ ಪ್ರತಿಭಟನೆ ನಡೆಸಿದಲ್ಲಿ ಅವರ ತಮ್ಮನ್ನು ತಾವು ಅಪಾಯಕ್ಕೆ ಸಿಕ್ಕಿಸಿಕೊಂಡಂತಾಗುತ್ತದೆ ಎಂದು ತಿಳಿಸಿದೆ.
ಬಾರ್ ಅಂಡ್ ಬೆಂಚ್ ವರದಿಯ ಪ್ರಕಾರ ಕೇಜ್ರಿವಾಲ್ ಅವರ ಬಂಧನವನ್ನು ಪ್ರತಿಭಟಿಸಲು ವಕೀಲರು ಮಧ್ಯಾಹ್ನ 12.30 ರ ಸುಮಾರಿಗೆ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಜಮಾಯಿಸಲಿದ್ದಾರೆ ಎಂದು ಎಎಪಿಯ ಕಾನೂನು ಕೋಶದ ರಾಜ್ಯ ಅಧ್ಯಕ್ಷ ವಕೀಲ ಸಂಜೀವ್ ನಾಸಿಯಾರ್ ತಿಳಿಸಿದ್ದರು. ಈ ವಿಷಯವನ್ನು ಗುರುವಾರ (ಮಾರ್ಚ್ 28) ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ತಿಳಿಸಿದೆ.
ನಾವು ಇದರ ವಿಚಾರಣೆಯನ್ನು ನಾಳೆ ಮಾಡುತ್ತೇವೆ. ಅದರ ಬಗ್ಗೆ ಚಿಂತೆ ಮಾಡಬೇಡಿ. ಕೋರ್ಟ್ ಇದನ್ನು ತಡೆಹಿಡಿಯಲಾಗುವುದಿಲ್ಲ ಅಥವಾ ನಿಲ್ಲಿಸಲಾಗುವುದಿಲ್ಲ. ನ್ಯಾಯಾಲಯವನ್ನು ಸಂಪರ್ಕಿಸಲು ಯಾರೊಬ್ಬರ ಮೂಲಭೂತ ಹಕ್ಕನ್ನು ನಾವು ಕಸಿದುಕೊಳ್ಳಲು ಸಾಧ್ಯವಿಲ್ಲ. ಯಾರಾದರೂ ಅದನ್ನು ಮಾಡಿದರೆ, ಅವರು ಅದನ್ನು ತಮ್ಮ ಸ್ವಂತ ಗಂಡಾಂತರದಲ್ಲಿ ಮಾಡುತ್ತಾರೆ ಮತ್ತು ಅಗತ್ಯವಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ನ್ಯಾಯಾಲಯ ಹೇಳಿದೆ.
ತನ್ನ ಬಂಧನವನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸುತ್ತಿದೆ.