ಹೊಸದಿಗಂತ ವರದಿ, ಕಟೀಲು:
ಪೆರ್ಮುದೆ ಹುಣ್ಸೆಕಟ್ಟೆಗಾಗಿ ಶಿಬರೂರಿಗೆ ಹೋಗುವ ರಸ್ತೆ ಪಕ್ಕದಲ್ಲೇ ಮನೆ ಮಾಡಿಕೊಂಡಿರುವ ಜೆರೋಂ ಸಿಕ್ಬೇರ ಅವರ ಮನೆಯ ಅಂಗಳಕ್ಕೆ ಮಂಗಳವಾರ ರಾತ್ರಿ ಒಂದು ಗಂಟೆಯ ಸುಮಾರಿಗೆ ಎರಡು ಚಿರತೆಗಳು ಬಂದು ಹೋಗಿವೆ.
ರಾತ್ರಿ ಹೊತ್ತು ಮನೆಯ ನಾಯಿಗಳು ಜೋರಾಗಿ ಬೊಗಳಿರುವುದರಿಂದ ಸಂಶಯದಿಂದ ಬುಧವಾರ ಬೆಳಿಗ್ಗೆ ಮನೆಯ ಸಿಸಿ ಕೆಮರಾವನ್ನು ಪರಿಶೀಲಿಸಿದಾಗ ಎರಡು ಚಿರತೆಗಳು ಏಕಕಾಲಕ್ಕೆ ಮನೆಯ ಅಂಗಳದಲ್ಲಿ ನಡೆದಾಡಿ ಹೋಗಿರುವುದು ಗಮನಕ್ಕೆ ಬಂದಿದೆ.
ಎರಡು ಮೂರು ವರುಷಗಳ ಹಿಂದೆ ಇದೇ ಹುಣ್ಸೆಕಟ್ಟೆ ಬೇಡಪದವು ಪರಿಸರದಲ್ಲಿ ಚಿರತೆಗಳನ್ನು ಕಂಡವರಿದ್ದಾರೆ. ಆದರೆ ಸಿಸಿ ಕ್ಯಾಮರಾ ಹಾಕಿ ನಾಲ್ಕು ತಿಂಗಳಷ್ಟೇ ಆಗಿದೆ. ಹಾಗಾಗಿ ನಿನ್ನೆಯಷ್ಟೇ ಮೊದಲ ಬಾರಿಗೆ ಕ್ಯಾಮರಾದಲ್ಲಿ ದಾಖಲಾಗಿರುವುದರಿಂದ ಚಿರತೆ ಬಂದಿರುವುದು ಖಚಿತವಾಗಿದೆ. ಅದೂ ಎರಡು ಚಿರತೆಗಳು ಎಂದು ಕೃಷಿಕರಾದ ಜೆರೊಂ ಸಿಕ್ವೇರ ತಿಳಿಸಿದ್ದಾರೆ.
ಕಳೆದ ವರುಷ ಎಕ್ಕಾರು ಪರಿಸರದಲ್ಲಿ ಚಿರತೆಯ ಓಡಾಟ, ದನವನ್ನು ತಿಂದಿರುವುದು ಸುದ್ದಿಯಾಗಿತ್ತು. ಇದೀಗ ಅಲ್ಲಿನ ಪೆರ್ಮುದೆ ಪರಿಸರದಲ್ಲಿ ಚಿರತೆಗಳು ಭಯದ ವಾತಾವರಣವನ್ನು ಸೃಷ್ಟಿಸಿವೆ. ಇಲ್ಲಿಂದ ಒಂದೆರಡು ಕಿಲೋಮೀಟರ್ ದೂರದ ಶಿಬರೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ವರ್ಷಾವಧಿ ಜಾತ್ರೆ ನಡೆಯುತ್ತಿದ್ದು ಸಹಸ್ರಾರು ಮಂದಿ ಭಾಗವಹಿಸುತ್ತಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ