ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪ್ರಧಾನಿ ಮೋದಿ, ಅಮಿತ್ ಶಾರಂತಹ ಯಾರೇ ನೂರು ಮಂದಿ ಬರಲಿ, 2024ರ ಚುನಾವಣೆ ಯಲ್ಲಿ ಅಧಿಕಾರಕ್ಕೆ ಬರುವುದು ಮಾತ್ರ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಾಗಾಲ್ಯಾಂಡ್ನಲ್ಲಿ ಚುನಾವಣಾ ಜಾಥಾದಲ್ಲಿ ಮಾತನಾಡಿದ ಅವರು, ದೇಶವನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯುವ ವ್ಯಕ್ತಿ ತಾನೊಬ್ಬನೇ, ಬೇರೆ ಯಾರಿಗೂ ನನ್ನ ಜಾಗಕ್ಕೆ ತಲುಪಲು ಸಾಧ್ಯವಿಲ್ಲ ಎಂದುಕೊಂಡಿದ್ದಾರೆ, ಆದರೆ ಈ ಬಾರಿ ಅವರ ಎಲ್ಲಾ ನಂಬಿಕೆಗಳು ಬುಡಮೇಲಾಗಲಿದೆ ಎಂದರು.
ಇಂದು ದೇಶದಲ್ಲಿ ಸಮಾನತೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಯಬೇಕಾದರೆ, ಬಿಜೆಪಿ ಅಧಿಕಾರದಿಂದ ತೊಲಗಬೇಕು. ಇದಕ್ಕಾಗಿ ಸಮಾನ ಮನಸ್ಕ ರಾಜಕೀಯ ಪಕ್ಷಗಳು ಒಂದಾಗಲೇಬೇಕು. ಈ ಮಹಾಮೈತ್ರಿಕೂಟಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕತ್ವ ನೀಡಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಪ್ರಧಾನಿ ಮೋದಿ ಅವರು ಹಲವಾರು ಬಾರಿ, ದೇಶ ಒಪ್ಪಿಕೊಂಡ ಏಕೈಕ ನಾಯಕ ನಾನಾಗಿದ್ದು, ಬೇರೆ ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ಎಂದು ಹೇಳಿದ್ದಾರೆ. ಯಾವುದೇ ಪ್ರಜಾಪ್ರಭುತ್ವವಾದಿ ಹೀಗೆ ಹೇಳುವುದಿಲ್ಲ ಎಂದುಖರ್ಗೆ ಗುಡುಗಿದ್ದಾರೆ.
ನಮ್ಮದು ಪ್ರಜಾತಂತ್ರ ವ್ಯವಸ್ಥೆ. ಇಲ್ಲಿ ಯಾರು ನಿರಂಕುಶಾಧಿಕಾರಿ ಅಲ್ಲ ಎಂಬುದನ್ನು ಪ್ರಧಾನಿ ಮೋದಿ ಅವರಿಗೆ ನಾವು ಮನವರಿಕೆ ಮಾಡಿಕೊಡುತ್ತೇವೆ. ಪ್ರಧಾನಿ ಮೋದಿ ಅವರು ಜನರಿಂದ ಆಯ್ಕೆಯಾಗಿದ್ದಾರೆಯೇ ಹೊರತು, ಅವರು ಸರ್ವಾಧಿಕಾರಿ ಅಲ್ಲ. ನಿಮ್ಮ ಸರ್ವಾಧಿಕಾರಿ ವರ್ತನೆಗೆ ಈ ದೇಶದ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಖರ್ಗೆ ಹರಿಹಾಯ್ದರು.