ಹೊಸದಿಗಂತ ವರದಿ,ಬಳ್ಳಾರಿ:
ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಬಾರದು, ನಿತ್ಯವೂ ವನಮಹೋತ್ಸವ ಎನ್ನುವಂತೆ ದಿನನಿತ್ಯ ಪರಿಸರ ಕುರಿತು ಜಾಗೃತಿ ವಹಿಸಬೇಕು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ನಗರದ ಸೇಂಟ್ ಅಂತೋನಿ ಚರ್ಚ್ ನಲ್ಲಿ ಭಾನುವಾರ ಕ್ಯಾಥೊಲಿಕ್ ಧರ್ಮಪ್ರಾಂತ್ಯ ಬಳ್ಳಾರಿ ವತಿಯಿಂದ ವನಮಹೋತ್ಸವ -2023 ನಿಮಿತ್ತ ಹಮ್ಮಿಕೊಂಡಿದ್ದ 2 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನೂರಾರು ಸಸಿಗಳನ್ನು ನೆಟ್ಟು ಬೆಳೆಸುವುದೇ ವನಮಹೋತ್ಸವದ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಜಾಗೃತಿ ವಹಿಸಬೇಕು. ನಿತ್ಯ ವಾಹನಗಳು ಹೆಚ್ಚಾಗುತ್ತಿವೆ. ಗಿಡ ಮರಗಳು ನಾಶವಾಗುತ್ತಿವೆ, ಪ್ಲಾಸ್ಟಿಕ್ ಬಳಕೆ ಜಾಸ್ತಿಯಾಗುತ್ತಿದ್ದು, ಇದರಿಂದ ವಾಯು ಮಾಲಿನ್ಯ, ಉಷ್ಣಾಂಶ ಹೆಚ್ಚಾಗುತ್ತಿದೆ. ಮಳೆ ಬೆಳೆಗಳು ಕಡಿಮೆಯಾಗುತ್ತಿವೆ. ಕಾರಣ ಇದರ ಬಗ್ಗೆ ಸಮತೋಲನ ಕಾಪಾಡಲು ಯುವಕರು ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಕ್ಯಾಥೊಲಿಕ್ ಧರ್ಮಪ್ರಾಂತ್ಯ ಬಳ್ಳಾರಿ ಅಧ್ಯಕ್ಷ ಬಿಷಪ್ ಹೆನ್ರಿ ಡಿಸೋಜಾ, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಡಿ. ತ್ರಿವೇಣಿ, ಉಪ ಮೇಯರ್ ಬಿ. ಜಾನಕಮ್ಮ, ಸದಸ್ಯರಾದ ನಿಯಾಜ್ ಅಹ್ಮದ್, ಕಾರ್ಯದರ್ಶಿ ಫಾ. ಪಿವಿ ಆಂಟನಿ, ಚರ್ಚ್ ಮುಖ್ಯಗುರು ಫಾ.ವಿನ್ಸೆಂಟ್ ರೋಡ್ರಿಗಸ್, ಉಪಾಧ್ಯಕ್ಷ ಜೆರಾಲ್ಡ್, ಕಾಂಗ್ರೆಸ್ ಪಕ್ಷದ ಮುಖಂಡ ಸೋಮು, ನಾಗಲಕೆರೆ ಗೋವಿಂದ, ಮುದ್ದಿ ಮಲ್ಲಯ್ಯ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.