ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 101 ವರ್ಷಗಳ ಇತಿಹಾಸ ಹೊಂದಿರುವ ನಿಪ್ಪಾಣಿ ಪಟ್ಟಣದ ಶ್ರೀರಾಮ ಮಂದಿರವನ್ನ ಸ್ಫೋಟಿಸುವದಾಗಿ ಬಂದಿರುವ ಅನಾಮಿಕ ಬೆದರಿಕೆ ಕುರಿತು ಪ್ರತಿಕ್ರಿಯಿಸಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಸ್ಫೋಟ ಬಿಡಿ ತಾಕತ್ತಿದ್ದರೆ ಒಂದೇ ಒಂದು ಕಲ್ಲು ಅಲುಗಾಡಿಸಿ ನೋಡೋಣ ಎಂದು ಸವಾಲೆಸೆದಿದ್ದಾರೆ.
ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂತಹಾ ಬೆದರಿಕೆಯನ್ನು ಹಿಂದು ಸಮಾಜ ಸಹಿಸಲ್ಲ, ಇವುಗಳಿಗೆ ಹೆದರುವುದೂ ಇಲ್ಲ. ಭಾರತದಲ್ಲಿ ಹಿಂದು ದೇವಾಲಯಗಳನ್ನು ಪೂಜಿಸಬೇಕು ಅಂತೇನಿಲ್ಲ, ಆದರೆ ಅದನ್ನು ಗೌರವಿಸಬೇಕು ಎಂದಿದ್ದಾರೆ.
ಇನ್ನು ಬೆದರಿಕೆ ಪತ್ರ ಬರೆದಿರುವುದನ್ನು ಖಂಡಿಸುತ್ತೇನೆ, ವಿರೋಧಿಸುತ್ತೇನೆ, ಸವಾಲು ಹಾಕುತ್ತೇನೆ. ರಾಮಮಂದಿರ ಮುಟ್ಟಿದ್ರೆ ಮುಂದಿನ ಸ್ಥಿತಿ ಏನಾಗುತ್ತದೆ, ಹಿಂದು ಸಮಾಜ ಹೇಗೆ ತಿರುಗೇಟು ಕೊಡುತ್ತದೆ ಎಂದು ನೋಡಿ ಎಂದು ಅವರು ವಿಡಿಯೋದಲ್ಲಿ ಎಚ್ಚರಿಕೆ ನೀಡಿದ್ದಾರೆ. ಎಲ್ಲ ರಾಮ ಮಂದಿರಗಳಿಗೂ ಸರ್ಕಾರ ಭದ್ರತೆ ಕೊಡಬೇಕು ಎಂದು ಕೂಡಾ ಇದೇ ಸಂದರ್ಭ ಮುತಾಲಿಕ್ ಆಗ್ರಹಿಸಿದ್ದಾರೆ.