ಹೊಸದಿಗಂತ ವರದಿ, ಬಳ್ಳಾರಿ:
ಬಿಜೆಪಿ ಅತ್ಯಂತ ಹಿರೀಯ ನಾಯಕ, ಮಾಜಿ ಸಿ.ಎಂ.ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ ಎಂದು ಹೇಳಿಕೆ ನೀಡಿರುವುದು ಆಘಾತ ತಂದಿದೆ, ಬಳ್ಳಾರಿ ಯಿಂದಲೇ ಅವರು ಸ್ಪರ್ಧಿಸಿ, ಲಕ್ಷಕ್ಕೂ ಹೆಚ್ಚು ಮತಗಳ ಅಂತರಗಳಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಅವರಲ್ಲಿ ಮನವಿ ಮಾಡುವೆ ಎಂದು ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಪಕ್ಷದ ಒಬ್ಬ ಧೀಮಂತ ನಾಯಕರು, ಅವರು ಪಕ್ಷಕ್ಕಾಗಿ ಪಟ್ಟ ಶ್ರಮ, ಅವರ ತ್ಯಾಗ ನಿಜಕ್ಕೂ ಎಲ್ಲರೂ ನೆನೆಯಲೇಬೇಕು, ಬಿಎಸ್ ವೈ ಅವರು ದಿಢೀರ್ ನೇ ಈ ಸುದ್ದಿ ಪ್ರಕಟಿಸಿರುವುದು ನಿಜಕ್ಕೂ ಆಘಾತ ತಂದಿದೆ. ಬಿಎಸ್ ವೈ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ, ಅವರನ್ನು ಭೇಟಿ ಮಾಡಿ ಬಳ್ಳಾರಿಯಿಂದಲೇ ಸ್ಪರ್ಧಿಸಿ ಎಂದು ಮನವಿ ಮಾಡುವೆ, ಕೋರ್ ಕಮೀಟಿ ಸಭೆಯಲ್ಲಿ ವೈಯಕ್ತಿಕವಾಗಿ ನಾನು ಅವರನ್ನು ಭೇಟಿ ಮಾಡಿ ಚುನಾವಣೆಯಿಂದ ಹಿಂದೆ ಸರಿಯುವ ಮಾತೇ ಬೇಡ, ತಮ್ಮ ಸಲಹೆ, ಸೂಚನೆ, ಮಾರ್ಗದರ್ಶನ ಅತ್ಯಗತ್ಯ, ಬಳ್ಳಾರಿಯಿಂದಲೇ ಸ್ಪರ್ಧಿಸಿ ಎಂದು ಮನವು ಮಾಡಿರುವೆ, ಮತ್ತೋಮ್ಮೆ ಮನವಿ ಮಾಡುವೆ. ಬಿಎಸ್ ವೈ ಅವರು ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿದರೆ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರಗಳಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ಎಸ್.ಗುರುಲಿಂಗನಗೌಡ, ಡಾ.ಬಿ.ಕೆ.ಸುಂದರ್, ಡಾ.ಅರುಣಾ, ಸೇರಿದಂತೆ ಇತರರಿದ್ದರು.