ಹೊಸದಿಗಂತ ವರದಿ, ವಿಜಯಪುರ :
ಬರುವ ವಿಧಾನಸಭೆ ಚುನಾವಣೆಗೆ ಜಿಲ್ಲೆಯ ಮೂರು ಮತಕ್ಷೇತ್ರ ಆಯ್ಕೆ ಮಾಡಿಕೊಂಡು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿರುವೆ, ಕಾಂಗ್ರೆಸ್ ವರಿಷ್ಠರು ಎಲ್ಲಿ ಸಲಹೆ ನೀಡುತ್ತಾರೋ ಅಲ್ಲಿ ಸ್ಪರ್ಧಿಸುವೆ ಎಂದು ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಸ್ವಕ್ಷೇತ್ರ ಬಸವನಬಾಗೇವಾಡಿ, ನನ್ನ ಹಳೆಯ ಮತಕ್ಷೇತ್ರ ಬಬಲೇಶ್ವರ ಹಾಗೂ ವಿಜಯಪುರ ನಗರ ಮತಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಚ್ಛೆಯಿಂದ ಟಿಕೆಟಗಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದರು.
ಕೆಲವರು ಇದು ಬ್ಲ್ಯಾಕ್ ಮೇಲ್ ತಂತ್ರ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ ನನ್ನ ಜೀವನದಲ್ಲಿ ಯಾವುದೇ ರೀತಿ ಬ್ಲ್ಯಾಕ್ ಮೇಲ್ ಮಾಡಿಲ್ಲ ಎಂದರು.
ಬಬಲೇಶ್ವರ ಮೊದಲು ನನ್ನ ಕ್ಷೇತ್ರವಾಗಿತ್ತು. ಮತದಾರರಿಗೆ ಹೇಳದೇ ಕ್ಷೇತ್ರ ಬಿಟ್ಟು ಹೋಗಿದ್ದೇನೆ. ಇದು ನನ್ಮ ತಪ್ಪು ನಿರ್ಧಾರವಾಗಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ವರಿಷ್ಠರು ಬಸವನಬಾಗೇವಾಡಿ ಕ್ಷೇತ್ರಕ್ಕೆ ನನಗಿಂತ ಯೋಗ್ಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮುಂದಾದರೆ ಅವರನ್ನು ಸಹ ಸ್ವಾಗತಿಸುತ್ತೇನೆ. ಎಂ.ಬಿ. ಪಾಟೀಲರು ನನ್ನ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರನ್ನು ಗೆಲ್ಲಿಸಿಕೊಡುವುದು ನನ್ನ ಜವಾಬ್ದಾರಿಯಾಗಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆಯಿಂದ ಹಿಂದೆ ಸರಿದು ಕೋಲಾರ ಕಡೆ ಹೊರಟಿರಬಹುದು. ಅದೇ ಒಬ್ಬ ಲೀಡರ್ ಗುಣ, ಸಿದ್ದರಾಮಯ್ಯಗೆ ಯಾವ ಕ್ಷೇತ್ರದಿಂದ ನಿಂತರು ಗೆಲ್ಲುವ ಸಾಮರ್ಥ್ಯವಿದೆ ಎಂದು ಹೇಳಿದರು.