ಹೊಸದಿಗಂತ ವರದಿ,ಅಂಕೋಲಾ:
ಯಾವುದೇ ಕಾರ್ಯ ಮಾಡುವಾಗ ಮೊದಲು ನಮಗೆ ಅದರಲ್ಲಿ ವಿಶ್ವಾಸ ಇರಬೇಕು. ಭಗವಂತನಲ್ಲಿ ಅಚಲ ವಿಶ್ವಾಸ ಇದ್ದರೆ ಆತ ಖಂಡಿತ ಫಲ ನೀಡುತ್ತಾನೆ ಎಂದು ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ನುಡಿದರು.
ಅವರು ಇಲ್ಲಿಯ ಮಠಾಕೇರಿಯ ಪ್ರಸಿದ್ದ ಶ್ರೀ ಕುಂಡೋದರಿ ದೇವಸ್ಥಾನದಲ್ಲಿ ಜರುಗಿದ ಶತಚಂಡಿ ಮಹಾಯಾಗದ ಸಮಾರೋಪದಲ್ಲಿ ಭಾನುವಾರ ಆಶೀರ್ವಚನ ನೀಡಿದರು.
ನಮಗೆ ಕಷ್ಟ ಬಂದಾಗ ಮಾತ್ರ ದೇವರ ನೆನಪಾಗುತ್ತದೆ. ಆದರೆ ಸುಖ ಬಂದೊಡನೆ ಭಗವಂತನನ್ನು ಮರೆಯುತ್ತೇವೆ. ಇದು ಆಗಬಾರದು. ಎಲ್ಲ ಕಾಲದಲ್ಲೂ ದೇವರ ಆರಾಧನೆ ಅಗತ್ಯ.ದೇವರಿಗೆ ನಮಗೆ ಯಾವಾಗ ಏನು ಕೊಡಬೇಕು ಅನ್ನೋದು ಗೊತ್ತು. ಹೀಗಾಗಿ ಬದುಕಿನಲ್ಲಿ ಸದಾ ವಿಶ್ವಾಸ ಅಗತ್ಯ ಎಂದರು.
ಮನುಷ್ಯನಿಗೆ ಎಷ್ಟು ಇದ್ದರೂ ತೃಪ್ತಿ ಇರಲ್ಲ. ಇನ್ನೂ ಬೇಕು ಎಂಬ ಭಾವದಲ್ಲಿ ಸದಾ ನರಳುತ್ತೇವೆ. ಇಂತಹ ಮನೋಭಾವ ಬದಲಾಗಬೇಕು. ಇದ್ದುದರಲ್ಲಿ ತೃಪ್ತ ಜೀವನ ನಡೆಸಬೇಕು. ಭಕ್ತಿ, ಶ್ರದ್ಧೆಯ ಮೂಲಕ ಬದುಕನ್ನು ಬೆಳಗಿಸಿಕೊಳ್ಳಬೇಕು ಎಂದರು.
ಕುಂಡೋದರಿ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಸಂಭ್ರಮದಿಂದ ನಡೆದ ಧಾರ್ಮಿಕ ಕಾರ್ಯಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು.