ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ವಿಜಯ ಸಂಕಲ್ಪ ಯಾತ್ರೆಯು ಕೇವಲ ನಾಯಕರ ಯಾತ್ರೆಯಲ್ಲ. ನಾವೆಲ್ಲರೂ ಬಿಜೆಪಿ ಗೆಲುವಿಗೆ ಪರಿಶ್ರಮ ಪಟ್ಟು ಕೆಲಸ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತಿಳಿಸಿದರು.
ಬೆಂಗಳೂರು ನಗರದ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಯಾತ್ರೆ ಸಂಚಾರದ ಸಂದರ್ಭದಲ್ಲಿ ಅವರು ಮಾತನಾಡಿ, ಬಿಟಿಎಂ ಕ್ಷೇತ್ರ ಸೇರಿ ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮತ್ತು ಬಿಜೆಪಿ ತಾಕತ್ತು ತೋರಿಸುವ ಚುನಾವಣೆ ಹತ್ತಿರದಲ್ಲಿದೆ ಎಂದರು.
ಸಚಿವ ಆರ್.ಅಶೋಕ್ ಅವರು ಮಾತನಾಡಿ, ಈ ಬಾರಿ 140ಕ್ಕೂ ಹೆಚ್ಚು ಸೀಟು ಪಡೆದು ನಿಚ್ಚಳ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷವು ದೇಶ ಮತ್ತು ರಾಜ್ಯವನ್ನು ಹಲವು ದಶಕಗಳ ಕಾಲ ಲೂಟಿ ಮಾಡಿತ್ತು. ಅದು ಲೂಟಿಕೋರರ ಪಕ್ಷ ಎಂದು ಟೀಕಿಸಿದರು. ಬಿಜೆಪಿ ಸಾಧನೆಗಳನ್ನು ಗಮನಿಸಿ ಮತ ನೀಡಲು ಅವರು ವಿನಂತಿಸಿದರು.
ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಕು.ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ, ವಿಭಾಗ ಪ್ರಭಾರಿ ಗೋಪಿನಾಥ್ ರೆಡ್ಡಿ, ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್.ಆರ್. ರಮೇಶ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮುಖಂಡ ಸಚ್ಚಿದಾನಂದ ಮೂರ್ತಿ ಮತ್ತಿತರರು ಭಾಗವಹಿಸಿದ್ದರು. ಸಾವಿರಾರು ಜನರು ರೋಡ್ ಷೋದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.