ಹೊಸದಿಗಂತ ವರದಿ ದಾವಣಗೆರೆ:
ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಸೋಮವಾರ ಬೆಳಗ್ಗೆ ಆರಂಭವಾಗಿದ್ದು, ಇದಕ್ಕೂ ಮೊದಲು ಬೀಗಗಳು ಕಳೆದು ಹೋದ ಕಾರಣ ಸ್ಟ್ರಾಂಗ್ ರೂಮ್ ಬಾಗಿಲು ತೆರೆಯಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ನಗರದ ಡಿ ಆರ್ ಆರ್ ಶಾಲೆಯ ಮತ ಎಣಿಕೆ ಕೇಂದ್ರದಲ್ಲಿ ಬೆಳಗ್ಗೆ 7.30ಕ್ಕೆ ಸ್ಟ್ರಾಂಗ್ ರೂಮ್ ಬಾಗಿಲು ತೆರೆದು 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಬೇಕಿತ್ತು. ಆದರೆ ಮತಯಂತ್ರಗಳಿದ್ದ ಸ್ಟ್ರಾಂಗ್ ರೂಮ್ ಬೀಗ ತೆರೆಯಲು ಸರಿಯಾದ ಕೀಗಳು ಸಿಗದ ಕಾರಣ ಸಿಬ್ಬಂದಿಗಳು ಬೀಗದ ಕೀ ಗೊಂಚಲುಗಳನ್ನು ತಂದು ಎಷ್ಟೇ ಪ್ರಯತ್ನಿಸಿದರೂ ಬೀಗ ತೆರೆಯಲಾಗಲಿಲ್ಲ. ಅಂತಿಮವಾಗಿ ಉಳಿ, ಸುತ್ತಿಗೆ ಉಪಯೋಗಿಸಿ ಸಿಬ್ಬಂದಿಗಳು ಸ್ಟ್ರಾಂಗ್ ರೂಮ್ ಬಾಗಿಲು ಒಡೆದು ತೆರೆದ ನಂತರ ಮತ ಎಣಿಕೆ ಕಾರ್ಯ ಸಾಗಿತು.
ಮೊದಲಿಗೆ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾಗಿದ್ದು ಸದ್ಯದ ಮಾಹಿತಿಯಂತೆ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಅವರಿಗಿಂತ 577 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.



