ಹೊಸ ದಿಗಂತ ವರದಿ, ವಿಜಯಪುರ:
ಶಾಸಕ ಮಾಡಾಳ ವಿರೂಪಾಕ್ಷಪ್ಪ ಪ್ರಕರಣದಲ್ಲಿ ಲೋಕಾಯುಕ್ತರು ಸರ್ವ ಸ್ವತಂತ್ರರಾಗಿದ್ದಾರೆ. ಈಗಾಗಲೇ ನಾನು ಈ ವಿಚಾರದಲ್ಲಿ ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಗ್ರಾಮದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತರಿಗೆ ನಾವು ಸರ್ವ ಸ್ವತಂತ್ರ ಕೊಟ್ಟಿದ್ದೇವೆ. ಲೋಕಾಯುಕ್ತರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ನ್ಯಾಯಾಲಯದ ತೀರ್ಮಾನಕ್ಕೆ ನಾವೆಲ್ಲಾ ತಲೆ ಬಾಗಬೇಕಾಗುತ್ತದೆ. ಇದರಲ್ಲಿ ಯಾವುದನ್ನೂ ಮುಚ್ಚಿಡೋ ಪ್ರಶ್ನೆ ಇಲ್ಲಾ ಎಂದರು.
ಎಸಿಬಿಗೆ ಕೊಟ್ಟಿದ್ದ ಕಾಂಗ್ರೆಸ್ ನ 59 ಕೇಸ್ ಗಳನ್ನು ಲೋಕಾಯುಕ್ತಕ್ಕೆ ಕೊಡುತ್ತೇವೆ. ಅಲ್ಲಿ ಕಾಂಗ್ರೆಸ್ ನ ಬಹಳಷ್ಟು ಬಣ್ಣ ಬದಲಾಗುತ್ತದೆ ಎಂದರು.
ಬಿಜೆಪಿಯ ಹಾಲಿ ನಾಲ್ಕಾರು ಶಾಸಕರಿಗೆ ಟಿಕೆಟ್ ಇಲ್ಲಾ ಎಂಬ ಬಿ.ಎಸ್. ಯಡಿಯೂರಪ್ಪ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಅವರು ಸಂಸದೀಯ ಮಂಡಳಿ ಸದಸ್ಯರಿದ್ದು, ಹೇಳಿದ್ದಾರೆ. ಸಂಸದೀಯ ಮಂಡಳಿ ಸಭೆಯಲ್ಲಿ ಒಂದೊಂದು ಕ್ಷೇತ್ರದ ಕುರಿತು ಚರ್ಚೆ ಆಗುತ್ತದೆ. ಒಂದು ಚುನಾವಣೆಗಿಂತ ಒಂದು ಚುನಾವಣೆ ಭಿನ್ನವಾಗಿರುತ್ತದೆ ಎಂದರು.
ನೂರಕ್ಕೆ ನೂರರಷ್ಟು ಎಲ್ಲರಿಗೂ ಟಿಕೆಟ್ ಕೊಟ್ಟಿರೋ ಉದಾಹರಣೆ ಇಲ್ಲ. ಸರ್ವೇ, ಫರ್ಫಾರ್ಮನ್ಸ್, ಎಲ್ಲಾ ಕ್ರೈಟೀರಿಯಾ ಇಟ್ಟುಕೊಂಡು ಮಾಡಲಾಗುತ್ತದೆ. ಇದನ್ನೇ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ ಎಂದರು.
ಸಿಎಂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಡಿಕೆಶಿ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ ಆ ಪುಣ್ಯಾತ್ಮ ಭ್ರಷ್ಟಾಚಾರಕ್ಕೂ ಅವರಿಗೂ ಬಿಡಲಾರದ ನಂಟು. ಈಗಾಗಲೇ ಅವರ ಮೇಲಿರೋ ಆರೋಪಕ್ಕೆ ಉತ್ತರ ನೀಡಲಿ ಎಂದರು.
ಸಿ.ಟಿ ರವಿ ಉಗ್ರರು ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ನವರಿಗೆ ದೇಶ ಭಕ್ತರು ಉಗ್ರರ ಹಾಗೆ ಕಾಣುತ್ತಾರೆ. ನಮಗೆ ದೇಶದ್ರೋಹಿಗಳು ಉಗ್ರರ ಹಾಗೆ ಕಾಣುತ್ತಾರೆ ಎಂದರು.