ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರನ ಅಂಗಳದಲ್ಲಿ ಭಾರತೀಯನೊಬ್ಬನನ್ನು ಇಳಿಸುವ ತನಕ ಚಂದ್ರಯಾನ ಮಿಷನ್ ಸರಣಿಯನ್ನು (Chandrayaan Series) ಮುಂದುವರಿಸಲಾಗುವುದು ಎಂದು ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ (S Somanath) ಅವರು ಮಹತ್ವದ ಘೋಷಣೆ ಮಾಡಿದ್ದಾರೆ.
ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಜತೆಗೆ ಎಸ್. ಸೋಮನಾಥ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಚಂದ್ರಯಾನ 3 ಮಿಷನ್ ಅದ್ಭುತ ಯಶಸ್ಸು ಕಂಡಿದೆ. ಮಿಷನ್ ಕಳುಹಿಸಿದ ದತ್ತಾಂಶ ಆಧರಿಸಿ ವೈಜ್ಞಾನಿಕ ಪ್ರಕಟಣೆಯನ್ನು ಆರಂಭಿಸಲಾಗಿದೆ. ನಾವೀಗ, ಚಂದ್ರನ ಅಂಗಳದಲ್ಲಿ ಭಾರತೀಯನೊಬ್ಬನನ್ನು ಇಳಿಸುವ ತನಕ ಚಂದ್ರಯಾನ ಸರಣಿಯ ಮಿಷನ್ಅನ್ನು ಮುಂದುವರಿಸಲು ತೀರ್ಮಾನಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಚಂದ್ರನ ಅಂಗಳಕ್ಕೆ ಮನುಷ್ಯನನ್ನು ಕಳುಹಿಸುವ ಮುನ್ನ ಭಾರಿ ಪ್ರಮಾಣದ ತಯಾರಿ ಬೇಕಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತದೆ. ಮುಂದಿನ ಮಿಷನ್ನಲ್ಲಿ ನಾವು ಇದೆಲ್ಲವನ್ನೂ ಸಾಧಿಸುವ ಹಾಗೂ ಆ ಮೂಲಕ ಮಾನವಸಹಿತ ಚಂದ್ರಯಾನ ಕೈಗೊಳ್ಳುವ ವಿಶ್ವಾಸದಲ್ಲಿದ್ದೇವೆ’ ಎಂದು ತಿಳಿಸಿದರು.