ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ರಾಮಜನ್ಮಭೂಮಿ ದೇಗುಲದ ‘ಪ್ರಾಣ ಪ್ರತಿಷ್ಠಾ’ (ಪ್ರತಿಷ್ಠಾಪನೆ) ಸಮಾರಂಭದ ಹಿನ್ನೆಲೆಯಲ್ಲಿ ಜನವರಿ 22 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ಆ ದಿನದಂದು ರಜೆ ಘೋಷಣೆ ಮಾಡಿದ್ದಾರೆ.
ಜೊತೆಗೆ ಜನವರಿ 22 ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಇರೋದಿಲ್ಲ ಎಂದು ಸಿಎಂ ಯೋಗಿ ಹೇಳಿದ್ದಾರೆ.
ಇದರ ಜೊತೆಗೆ ಭಾರತೀಯ ಜನತಾ ಪಕ್ಷದ ನೇತೃತ್ವದ ಅಸ್ಸಾಂ ಮತ್ತು ಛತ್ತೀಸ್ಗಢದ ರಾಜ್ಯ ಸರ್ಕಾರಗಳು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ನಡೆಯುವುದರಿಂದ ಅದನ್ನು ಡ್ರೈ ಡೇ ಎಂದು ಘೋಷಣೆ ಮಾಡಲು ನಿರ್ಧಾರ ಮಾಡಿದೆ.
ಪ್ರಾಣ ಪ್ರತಿಷ್ಠಾಪನೆ ನಡೆಯುವ ದಿನ ರಾಜ್ಯ ಎಲ್ಲೂ ಮದ್ಯ ಮಾರಾಟ ಇರೋದಿಲ್ಲ ಸಿಎಂ ಯೋಗಿ ಆದಿತ್ಯನಾಥ್ ಅವರು ತಿಳಿಸಿದ್ದಾರೆ. ಆ ದಿನವನ್ನು ಇಡೀ ರಾಜ್ಯ ರಾಷ್ಟ್ರೀಯ ಹಬ್ಬ ಎನ್ನುವಂತೆ ಸಂಭ್ರಮಿಸುವುದಾಗಿ ತಿಳಿಸಿದೆ. ಇನ್ನು ರಾಜ್ಯದ ಯಾವುದೇ ಶೈಕ್ಷಣಿಕ ಸಂಸ್ಥೆಗಳು ಆ ದಿನ ಕಾರ್ಯ ನಿರ್ವಹಿಸೋದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
“ರಾಮ ಮಂದಿರದ ಉದ್ಘಾಟನೆಯ ನೆನಪಿನಲ್ಲಿ ಅಸ್ಸಾಂ ಸರ್ಕಾರವು ಜನವರಿ 22 ಅನ್ನು ಮದ್ಯ ಮಾರಾಟ ನಿಷೇಧ ದಿನವನ್ನಾಗಿ ಘೋಷಿಸಲು ನಿರ್ಧರಿಸಿದೆ” ಎಂದು ಅಸ್ಸಾಂ ಪ್ರವಾಸೋದ್ಯಮ ಸಚಿವ ಜಯಂತ್ ಮಲ್ಲಾ ಬರುವಾ ತಿಳಿಸಿದ್ದಾರೆ.
ರಾಮ ರಾಜ್ಯ ಎನ್ನುವುದು ಉತ್ತರ ಆಡಳಿತದ ಮಾದರಿ. ಭಗವಾನ್ ರಾಮನ ನಾನಿಹಾಲ್ (ರಾಮನ ತಾಯಿಯ ಅಜ್ಜಿಯ ಊರು) ಆಗಿರುವುದು ನಮ್ಮ ಅದೃಷ್ಟ. ಜನವರಿ 22 ರಂದು ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯನ್ನು ನೋಡಲು ಸಾಧ್ಯವಾಗುತ್ತಿರುವುದು ನಮ್ಮ ಅದೃಷ್ಟ ಎಂದು ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ತಿಳಿಸಿದ್ದಾರೆ.
ಅನೇಕ ಇತರ ರಾಜ್ಯಗಳ ಬಿಜೆಪಿ ಶಾಸಕರು ತಮ್ಮ ರಾಜ್ಯ ಸರ್ಕಾರದಿಂದ ಅದೇ ಬೇಡಿಕೆಯನ್ನು ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ರಾಮಮಂದಿರ ಪ್ರಾಣಪ್ರತಿಷ್ಠಾಪನೆ ದಿನ ರಾಜ್ಯದಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ನಿಷೇಧ ಮಾಡುವ ನಿಟ್ಟಿನಲ್ಲಿ ಯೋಚನೆ ಮಾಡಬೇಕು ಎಂದು ಬಿಜೆಪಿ ಶಾಸಕ ರೋಹನ್ ಕದಮ್ ತಿಳಿಸಿದ್ದಾರೆ.
ಇನ್ನು ಜಾರ್ಖಂಡ್ ರಾಜ್ಯದ ಬಿಜೆಪಿಯ ಮಾಜಿ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ದೀಪಕ್ ಪ್ರಕಾಶ್ ಕೂಡ ಸಿಎಂ ಹೇಮಂತ್ ಸೊರೇನ್ಗೆ ಪತ್ರ ಬರೆದಿದ್ದು, ಜಾರ್ಖಂಡ್ನಲ್ಲಿ ಜನವರಿ 22 ರಂದು ಮದ್ಯ ಮಾರಾಟ ನಿಷೇಧ ದಿನ ಎಂದು ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ.