ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಕೈಗಡಿ ಮತ್ತು ಯಲ್ಲಾಪುರ ತಾಲೂಕಿನ ಅರಬೈಲ್ ನಡುವಿನ ಪಣಸಗುಳಿ ಸೇತುವೆ ಮೇಲಿಂದ ಗಂಗಾವಳಿ ನದಿಗೆ ಲಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದ ಗೋಕರ್ಣ ಬಂಕಿಕೊಡ್ಲ ಸಮೀಪದ ಸಂದೀಪ ಆಗೇರ ಮೃತ ದೇಹ ಮೂರು ದಿನಗಳ ನಂತರ ಲಾರಿ ಬಿದ್ದ ಸ್ಥಳದಲ್ಲಿಯೇ ಪತ್ತೆಯಾಗಿದೆ.
ಬುಧವಾರ ಸಂಜೆ ಯಲ್ಲಾಪುರ ತಾಲೂಕು ವ್ಯಾಪ್ತಿಯ ಪಣಸಗುಳಿ ಸೇತುವೆ ಮೇಲಿಂದ ಸಂಚರಿಸುತ್ತಿದ್ದ ಲಾರಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿ ನೀರಿನಲ್ಲಿ ಮುಳುಗಡೆಯಾಗಿತ್ತು.
ಲಾರಿಯಲ್ಲಿದ್ದ 6 ಜನರಲ್ಲಿ ಐವರನ್ನು ಬುಧವಾರ ಸಂಜೆ ಗುಳ್ಳಾಪುರದಿಂದ ಬೋಟ್ ತರಿಸಿ ರಕ್ಷಣೆ ಮಾಡಲಾಗಿತ್ತು.
ಕಣ್ಮರೆಯಾಗಿದ್ದ ಸಂದೀಪನಿಗಾಗಿ ಕಳೆದ ಎರಡು ದಿನಗಳಿಂದ ಸತತ ಶೋಧ ಕಾರ್ಯ ನಡೆಸಿದರೂ ಯಾವುದೇ ರೀತಿಯ ಸುಳಿವು ದೊರಕಿರಲಿಲ್ಲ.
ಗುರುವಾರ ಕ್ರೇನ್ ಬಳಸಿ ನದಿಯಲ್ಲಿ ಬಿದ್ದ ಲಾರಿಯನ್ನು ಎತ್ತಲಾಯಿತಾದರೂ ಸಂದೀಪನ
ಪತ್ತೆ ಆಗಿರಲಿಲ್ಲ.
ಶುಕ್ರವಾರ ಸ್ಥಳೀಯರು ನಾಲ್ಕು ದೋಣಿಗಳ ಮೂಲಕ ಕಣ್ಮರೆಯಾದ ವ್ಯಕ್ತಿಯ ಶೋಧಕಾರ್ಯವನ್ನು ಗಂಗಾವಳಿ ನದಿಯಲ್ಲಿ ಮುಂದುವರಿಸಿದ್ದರು
ಅಂಕೋಲಾ ತಾಲೂಕಿನ ಡೋಂಗ್ರಿ ಮತ್ತು ಸುಂಕಸಾಳ ಪಂಚಾಯಿತಿ ವತಿಯಿಂದ ಸಹ ಶೋಧ ಕಾರ್ಯ ನಡೆಸಲಾಗಿತ್ತು ಕೊನೆಗೂ ಲಾರಿ ಬಿದ್ದ ಪಣಸಗುಳಿ ಸೇತುವೆ ಬಳಿಯೇ ಯುವಕನ ಮೃತ ದೇಹ ಶುಕ್ರವಾರ ಸಂಜೆ ಪತ್ತೆಯಾಗಿದೆ.
ಮೃತ ಯುವಕನ ಊರಿನ ನೂರಾರು ಜನರು ಸ್ಥಳದಲ್ಲಿ ಜಮಾವಣೆಗೊಂಡಿದ್ದರು
ಸ್ಥಳೀಯ ಜನರು ಮೂರು ದಿನಗಳಿಂದ ಸಾಕಷ್ಟು ಸಹಾಯ ಸಹಕಾರ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.