ಹೊಸದಿಗಂತ ವರದಿ, ಮಂಡ್ಯ:
ಇಂಜಿನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಪೇಪರ್ ತುಂಬಿದ ಲಾರಿಯೊಂದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಜೆ.ಸಿ. ವೃತ್ತದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಮೈಸೂರು ಕಡೆಗೆ ಪೇಪರ್ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ಲಾರಿಯ ಇಂಜಿನ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ. ಲಾರಿ ಚಲಿಸುತ್ತಿದ್ದಂತೆ ಬೆಂಕಿಯ ಜ್ವಾಲೆ ನಿಧಾನವಾಗಿ ಒಂದು ಬದಿಯ ಲಾರಿಗೆ ಹೊತ್ತಿಕೊಂಡು ನಂತರ ಮೇಲಿದ್ದ ಕಾದಕ್ಕೆ ಸ್ಪರ್ಶ ಉಂಟಾಗಿ ಪೇಪರ್ ಬಂಡಲ್ ಹೊತ್ತಿ ಉರಿಯಲು ಆರಂಭಿಸಿತ್ತು.
ಲಾರಿಯ ಮೇಲ್ಬಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡ ಸಾರ್ವಜನಿಕರು ತಕ್ಷಣ ಚಾಲಕನಿಗೆ ಸುದ್ಧಿ ತಿಳಿಸಿ ಲಾರಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಗಾಭರಿಗೊಳಗಾದ ಚಾಲಕ ಲಾರಿಯನ್ನು ನಿಲ್ಲಿಸಿ ತಕ್ಷಣ ಇಳಿದಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಬೆಂಕಿಯನ್ನು ನಂದಿಸಲು ಶ್ರಮಿಸಿದ್ದಾರೆ. ಈ ವೇಳೆ ಸುದ್ಧಿ ತಿಳಿದ ಅಗ್ನಿಶಾಮಕ ದಳವೂ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಾರಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದರೆ, ಮೇಲ್ಬಾಗದಲ್ಲಿದ್ದ ಪೇಪರ್ನ ಒಂದೆರಡು ಬಂಡಲ್ಗಳಿಗೆ ಮಾತ್ರ ಬೆಂಕಿ ತಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ. ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.