ಹೊಸದಿಗಂತ ವರದಿ ವಿಜಯಪುರ:
ಪ್ರೀತಿಗಾಗಿ ಯುವ ಪ್ರೇಮಿಗಳಿಬ್ಬರು ಬಲಿಯಾಗಿರುವ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳ್ಳಕವಟಗಿಯ ಅಪ್ರಾಪ್ತ ಹುಡುಗಿ ಹಾಗೂ ಘೋಣಸಗಿ ಮಲ್ಲು ಜಮಖಂಡಿ ಮಧ್ಯೆ ಪ್ರೇಮಾಂಕುರವಾಗಿತ್ತು. ಈ ಪ್ರೇಮಿಗಳಿಬ್ಬರು ಏಕಾಂತದಲ್ಲಿದ್ದಾಗ ಹುಡುಗಿಯ ತಂದೆ ಗುರಪ್ಪನ ಕೈಗೆ ಸಿಕ್ಕಿ ಬಿದ್ದಿದ್ದರು. ಆಗ ಬಾಲಕಿಯ ತಂದೆ ಇಬ್ಬರಿಗೂ ಬುದ್ದಿ ಹೇಳಿದ್ದರಾದರೂ, ತಂದೆಯ ಮಾತು ಕೇಳದೆ ಆತುರದಲ್ಲಿ ಬಾಲಕಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದರಿಂದ ವಿಚಲಿತನಾದ ಬಾಲಕಿಯ ತಂದೆ,
ತನ್ನ ಮಗಳ ಸಾವಿಗೆ ಕಾರಣವಾದ ಯುವಕ ಮಲ್ಲುನನ್ನು ಬಿಡಬಾರದು ಎಂದು ಕೈಕಾಲು ಕಟ್ಟಿ ಹಾಕಿ, ಅದೇ ವಿಷವನ್ನು ಯುವಕನಿಗೆ ಕುಡಿಸಿ ಕೊಲೆ ಮಾಡಲಾಗಿತ್ತು. ಇನ್ನೂ ಪ್ರಕರಣಕ್ಕೆ ಸಂಭಂದಿಸಿದಂತೆ ಹುಡುಗಿಯ ತಂದೆ ಗುರಪ್ಪ ಹಾಗೂ ಆತನ ಅಳಿಯ ಅಜೀತ್ ನನ್ನು ವಿಚಾರಣೆ ನಡೆಸಲಾಗುತ್ತಿದೆ.
ಮಲ್ಲು ಶವ ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ಸಿಕ್ಕಿದೆ. ಸೆಪ್ಟೆಂಬರ್ 22 ರಂದು ಈ ಘಟನೆ ನಡೆದಿದ್ದು, ಶವ ಸಿಕ್ಕಿದ ಬಳಿಕ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ತಿಕೋಟಾ ಹಾಗೂ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.