ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಉತ್ತರ ತಾಲ್ಲೂಕಿನ ನೆಲಮಂಗಲ ಪಟ್ಟಣದ ಬಳಿಯ ಅಡಕಮಾರಹಳ್ಳಿಯಲ್ಲಿ ಗುರುವಾರ ಎಲ್ಪಿಜಿ ಸಿಲಿಂಡರ್ ಸೋರಿಕೆಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಇಬ್ಬರು ಸಜೀವ ದಹನವಾಗಿ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡ ಆಘಾತಕಾರಿ ಘಟನೆ ವರದಿಯಾಗಿದೆ.
ಮೃತರನ್ನು 50 ವರ್ಷದ ನಾಗರಾಜು ಮತ್ತು 50 ವರ್ಷದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಅಭಿಷೇಕ್ ಗೌಡ, ಶಿವಶಂಕರ್, ಲಕ್ಷ್ಮಿದೇವಿ ಮತ್ತು ಬಸನಗೌಡ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಮನೆಯೊಳಗಿನ ಎಲ್ಪಿಜಿ ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ. ಪೊಲೀಸರ ಪ್ರಕಾರ, ನಾಗರಾಜು ಬಳ್ಳಾರಿ ಮೂಲದವರಾಗಿದ್ದು, ಪತ್ನಿ ಲಕ್ಷ್ಮಿದೇವಿ ಮತ್ತು ಮಕ್ಕಳಾದ ಅಭಿಷೇಕ್ ಗೌಡ ಮತ್ತು ಬಸನ ಗೌಡ ಅವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಗ್ಯಾಸ್ ಖಾಲಿಯಾಗಿದ್ದಾಗ ಮತ್ತೊಂದು ಸಿಲಿಂಡರ್ ಅನ್ನು ಜೋಡಿಸಿದ ಅಭಿಷೇಕ್ ಅನಿಲ ಸೋರಿಕೆಯಾಗಿರುವುದನ್ನು ಗಮನಿಸಿಲ್ಲ. ಬಳಿಕ ದೇವರ ಫೋಟೊ ಮುಂದೆ ದೀಪ ಹಚ್ಚಿದಾಗ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಮನೆಗೆ ಬೆಂಕಿ ವ್ಯಾಪಿಸಿದೆ ಎಂದು ವರದಿಯಾಗಿದೆ.