ಮಡಿಕೇರಿ: ಅಕ್ರಮವಾಗಿ ನಿರ್ಮಿಸಿದ್ದೆನ್ನಲಾದ ಮನೆ ಕೆಡವಲು ಬಂದ ನಗರಸಭೆಯ ಅಧಿಕಾರಿಗಳ ಮುಂದೆ ಗ್ಯಾಸ್ ಆನ್ ಮಾಡಿ ಆತ್ಮಹತ್ಯೆಯ ಬೆದರಿಕೆಯೊಡ್ಡಿದ ಘಟನೆಯೊಂದು ನಗರದಲ್ಲಿ ನಡೆದಿದೆ. ನಗರದ ಚೈನ್ ಗೇಟ್ ಬಳಿ ವಾಸವಿರುವ ಚಿತ್ರ ಕಲಾವಿದ ಸಂದೀಪ್ ಅವರ ಕುಟುಂಬವೇ ಈ ಹೈಡ್ರಾಮ ನಡೆಸಿದ ಕುಟುಂಬ.
ಸಂದೀಪ್ ವಿರುದ್ಧ ನಗರಸಭೆ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ ಮಾಡಿಕೊಂಡಿರುವ ಆರೋಪವಿದ್ದು, ಅಕ್ರಮ ಸಕ್ರಮ ಯೋಜನೆಯಡಿ ಮನೆ ಸಕ್ರಮಕ್ಕೆ ಅರ್ಜಿ ಹಾಕಿದ್ದಾರೆನ್ನಲಾಗಿದೆ. ಈ ನಡುವೆ ಸಂದೀಪ್ ತಮ್ಮ ಫೇಸ್ಬುಕ್ನಲ್ಲಿ ತಮ್ಮ ವಾರ್ಡ್ ಕೌನ್ಸಿಲರ್ ಹಾಗೂ ಪೌರಾಯುಕ್ತರ ಕುರಿತಾಗಿ ವ್ಯಂಗ್ಯ ಚಿತ್ರವೊಂದನ್ನು ಪ್ರಕಟಿಸಿದ್ದರೆನ್ನಲಾಗಿದೆ.
ಈ ಸಂಬಂಧ ಸಂದೀಪ್ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರ ಸಭೆ ಆಯುಕ್ತ ರಾಮದಾಸ್ ಅವರು ಜೆಸಿಬಿ ತಂದು ಮನೆ ಒಡೆಯಲು ಮುಂದಾಗಿದ್ದರು. ಮನೆ ಒಡೆಯಲು ಮುಂದಾದಾಗ ಸಂದೀಪ್ ಕುಟುಂಬ ಮನೆ ಗ್ಯಾಸ್ ಆನ್ ಮಾಡಿ ಬೆಂಕಿಪೆಟ್ಟಿಗೆ ಹಿಡಿದು ಬೆದರಿಕೆಯೊಡ್ಡಿದೆ!
ಕಳೆದ ವಾರವಷ್ಟೇ ಸಂದೀಪ್, ಮನೆಗೆ ವಿದ್ಯುತ್ ಸಂಪರ್ಕ ನೀಡಿಲ್ಲ ಎಂಬ ಆರೋಪ ಹೊರಿಸಿ ಉರುಳು ಸೇವೆ ಮಾಡಲು ಹೋಗಿ ಪೊಲೀಸರ ವಶವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.