ಕಾಸರಗೋಡು: ಕುಡಿದ ಮತ್ತಿನಲ್ಲಿ ಸಹೋದರರ ಮಧ್ಯೆ ಘರ್ಷಣೆ ನಡೆದು ಕೊಲೆಯಲ್ಲಿ ಪರ್ಯಾವಸಾನಗೊಂಡ ಘಟನೆ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಲ ಬಳಿಯ ಶೇಣಿ ಬಪ್ಪಳಿಗೆ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಬಪ್ಪಳಿಕೆ ನಿವಾಸಿ ದಿ.ಬಲ್ತೀಸ್ ಡಿಸೋಜ ಎಂಬವರ ಪುತ್ರ ಥೋಮಸ್ ಡಿಸೋಜ (45) ಎಂಬವರೇ ಕೊಲೆಗೀಡಾದವರು. ಇವರ ಸಹೋದರ ಅಜು ಯಾನೆ ರಾಜೇಶ್ ಡಿಸೋಜ ಎಂಬಾತ ಕತ್ತಿಯಿಂದ ಕಡಿದಿರುವುದಾಗಿ ಮಾಹಿತಿ ಲಭಿಸಿದ್ದು , ಆರೋಪಿಯು ಪೊಲೀಸರ ಮುಂದೆ ಶರಣಾಗಿದ್ದಾನೆ.
ಸೋಮವಾರ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕುಡಿತದ ಮತ್ತಿನಲ್ಲಿ ಸಹೋದರರೊಳಗೆ ವಾಕ್ಸಮರ ಏರ್ಪಟ್ಟು ಕೊಲೆಗೆ ಕಾರಣವಾಯಿತು. ಘಟನಾ ಸಂದರ್ಭ ಅವರ ಜೊತೆಗಿದ್ದ ಥೊಮಸ್ ಡಿಸೋಜರ ಚಿಕ್ಕಪ್ಪನ ಪುತ್ರ ವಿಲ್ಫಿ ಡಿಸೋಜ ಗಂಭೀರ ಗಾಯಗೊಂಡಿದ್ದು , ಅವರನ್ನು ಪರಿಯಾರಂ ವ್ಯೆದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೃತ ಥೋಮಸ್ ಡಿಸೋಜ ಅವರು ತಾಯಿ, ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದು , ಘಟನಾ ಸ್ಥಳಕ್ಕೆ ತೆರಳಿ ಸಮಗ್ರ ತನಿಖೆ ಕೈಗೊಂಡಿದ್ದಾರೆ.