ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾರ್ಮುಜ್ ಜಲಸಂಧಿಯ ಬಳಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡ ಮತ್ತೊಂದು ತೈಲ ಟ್ಯಾಂಕರ್ ಮೇಲೆ ದಾಳಿಯಾಗಿದೆ ಎಂಬ ವರದಿಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟವಾಗಿ ತಳ್ಳಿಹಾಕಿದೆ.
ಸಿಬ್ಬಂದಿ ಸುರಕ್ಷಿತವಾಗಿದ್ದಾರೆ:ವಿದೇಶಾಂಗ ಸಚಿವಾಲಯ ಸ್ಪಷ್ಟನೆ
ಸಚಿವಾಲಯವು ಹಡಗಿನ ಕ್ಯಾಪ್ಟನ್ ಅವರೊಂದಿಗೆ ಮಾತನಾಡಿದ್ದು, ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅವರು ಖಚಿತಪಡಿಸಿದ್ದಾರೆ. “ನಾವು ‘ಲಿಯಾಕಿ ಫ್ರೀಡಂ’ ಹಡಗಿನ ಮಾಸ್ಟರ್ರೊಂದಿಗೆ ಮಾತನಾಡಿದ್ದೇವೆ. ಅವರು ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ ಮತ್ತು ದಾಳಿ ನಡೆದಿರುವ ಬಗ್ಗೆ ವರದಿಯಾಗಿರುವ ಮಾಹಿತಿ ಸುಳ್ಳು ಎಂದು ತಿಳಿಸಿದ್ದಾರೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ವೀಡಿಯೊ ಕ್ಲಿಪ್ ಮೂಲಕ ಸ್ಪಷ್ಟನೆ
ಜಾಗತಿಕ ನಾವಿಕರ ಸಂಘಟನೆಯಾದ ‘ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ’ ಕೂಡ ಹಡಗಿನ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದು ಖಚಿತಪಡಿಸಿದೆ. FSUI ಹಂಚಿಕೊಂಡಿರುವ ಒಂದು ವೀಡಿಯೊ ಕ್ಲಿಪ್ನಲ್ಲಿ, ಅಧಿಕಾರಿಯೊಬ್ಬರು ಲಿಯಾಕಿ ಫ್ರೀಡಂ ಹಡಗಿನ ಸಿಬ್ಬಂದಿಗೆ, “ಸರ್, ನಿಮಗೆ ಏನಾಗಿದೆ? ಎಲ್ಲವೂ ಸರಿಯಾಗಿದೆಯೇ?” ಎಂದು ಕೇಳುತ್ತಿರುವುದು ಕೇಳಿಸುತ್ತದೆ. ಅದಕ್ಕೆ ಸಿಬ್ಬಂದಿ, “ಎಲ್ಲವೂ ಸರಿ ಇದೆ, ಎಲ್ಲವೂ ಸರಿ ಇದೆ. ಯಾವುದೇ ದಾಳಿ ಆಗಿಲ್ಲ, ಬೆಂಕಿ ಕೂಡ ಹತ್ತಿಕೊಂಡಿಲ್ಲ” ಎಂದು ಉತ್ತರಿಸಿದ್ದಾರೆ. ಇದಕ್ಕೂ ಮುನ್ನ ಯೂನಿಯನ್ ಮಾಡಿದ್ದ ಪೋಸ್ಟ್ನಲ್ಲಿ, ಹಡಗಿನಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ತಿಳಿಸಲಾಗಿತ್ತು.
ಓಮನ್ ದೇಶದ ಕಡೆಗೆ ಮುಖ ಮಾಡಿದ್ದ ‘ಲಿಯಾಕಿ ಫ್ರೀಡಂ’ ಮಾರ್ಷಲ್ ಐಲ್ಯಾಂಡ್ಸ್ ಧ್ವಜದ ಅಡಿಯಲ್ಲಿ ಚಲಿಸುತ್ತಿರುವ ತೈಲ ಮತ್ತು ರಾಸಾಯನಿಕ ಸಾಗಿಸುವ ಬೃಹತ್ ಟ್ಯಾಂಕರ್ ಆಗಿದೆ.
ಜೂನ್ 8 ರಿಂದೀಚೆಗೆ, ಭಾರತೀಯ ಸಿಬ್ಬಂದಿಯನ್ನು ಹೊಂದಿದ್ದ ಮೂರು ಹಡಗುಗಳನ್ನು ಯುಎಸ್ ಮಿಲಿಟರಿ ಗುರಿಯಾಗಿಸಿಕೊಂಡಿದೆ. ಜೂನ್10 ರಂದು ನಡೆದ ಎರಡನೇ ಘಟನೆಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದರು. ಅದರ ಮರುದಿನವೇ ಮೂರನೇ ಹಡಗಿನ ಮೇಲೂ ದಾಳಿ ನಡೆದಿತ್ತು.
ಫೆಬ್ರವರಿ 28 ರಂದು ಯುಎಸ್ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಪ್ರತಿಕ್ರಿಯೆಯಾಗಿ ಟೆಹ್ರಾನ್ ಮಾರ್ಚ್ ಆರಂಭದಲ್ಲಿ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಿದ ನಂತರ ಈ ದಿಗ್ಬಂಧನವನ್ನು ಪರಿಚಯಿಸಲಾಯಿತು. ಇದು ಇಡೀ ಮಧ್ಯಪ್ರಾಚ್ಯ ಸಂಘರ್ಷಕ್ಕೆ ಕಾರಣವಾಯಿತು. ಜಾಗತಿಕ ಕಚ್ಚಾ ತೈಲದ ಸುಮಾರು ಶೇ. 20 ರಷ್ಟು ಭಾಗ ಈ ಹಾರ್ಮುಜ್ ಜಲಸಂಧಿಯ ಮೂಲಕವೇ ಹಾದುಹೋಗುತ್ತದೆ, ಹೀಗಾಗಿ ಇದು ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾಗಿದೆ.
ಯುಎಸ್ ರಾಯಭಾರಿಗೆ ಎರಡು ಬಾರಿ ಸಮನ್ಸ್ ಜಾರಿ
ಭಾರತೀಯ ಸಿಬ್ಬಂದಿ ಇದ್ದ ಟ್ಯಾಂಕರ್ಗಳನ್ನು ಗುರಿಯಾಗಿಸಿಕೊಂಡಿರುವುದನ್ನು ಪ್ರತಿಭಟಿಸಲು ವಿದೇಶಾಂಗ ಸಚಿವಾಲಯವು ನವದೆಹಲಿಯಲ್ಲಿರುವ ಯುಎಸ್ ರಾಯಭಾರಿ ಜೇಸನ್ ಮೀಕ್ಸ್ ಗೆ ಈಗಾಗಲೇ ಎರಡು ಬಾರಿ ಸಮನ್ಸ್ ಜಾರಿ ಮಾಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಕೂಡ ತಮ್ಮ ಯುಎಸ್ ಕೌಂಟರ್ಪಾರ್ಟ್ ಮಾರ್ಕೊ ರೂಬಿಯೋಯೊಂದಿಗೆ ಮಾತನಾಡಿ, ಭಾರತೀಯ ನಾವಿಕರ ಸಾವಿನ ಬಗ್ಗೆ ಭಾರತದ “ತೀವ್ರ ಪ್ರತಿಭಟನೆ”ಯನ್ನು ಪುನರುಚ್ಚರಿಸಿದ್ದಾರೆ.



