ಹೊಸ ದಿಗಂತ ವರದಿ, ಚಿತ್ರದುರ್ಗ:
ಆಸೆ ಆಮಿಷಗಳಿಗೆ ಬಲಿಯಾಗಿ ಬೇರೆ ಧರ್ಮಕ್ಕೆ ಧರ್ಮದ ಮತಾಂತರಗೊಂಡವರಿಗೆ ಸರ್ಕಾರ ಮೀಸಲಾತಿ ರದ್ದುಪಡಿಸಬೇಕು ಎಂದು ಬಂಜಾರ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್ ಕುಮಾರ್ ಒತ್ತಾಯಿಸಿದರು.
ಸರ್ದಾರ್ ಸೇವಾಲಾಲ್ ಜಯಂತಿ ಹಾಗೂ ಮತಾಂತರ ತಡೆಗಟ್ಟುವ ಕುರಿತು ಬಂಜಾರ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗೋರ್ (ಬಂಜಾರ) ಮಳಾವ್ ಕರ್ನಾಟಕ ಚಿತ್ರದುರ್ಗ ಜಿಲ್ಲೆ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲೆಡೆ ಬಂಜಾರ ಜನಾಂಗದವರಿಗೆ ಜಾಗೃತಿ ಮೂಡಿಸುವ ಮೂಲಕ ಮತಾಂತರವಾಗುತ್ತಿರುವುದನ್ನು ತಡೆಗಟ್ಟಬೇಕಿದೆ ಎಂದರು.
ಮಾರ್ಚ್ 1 ರಂದು ಸರ್ದಾರ್ ಸೇವಾಲಾಲ್ ಜಯಂತಿಯನ್ನು ಆಚರಿಸಲಾಗುವುದು. ಪ್ರತಿ ವರ್ಷದಂತೆ ಈ ಬಾರಿಯ ನಮ್ಮ ಜನಾಂಗದ ವತಿಯಿಂದ ಜಯಂತಿಯನ್ನು ಆಚರಿಸುತ್ತಿದ್ದೇವೆ. ರಾಜಕೀಯ ಗಿಮಿಕ್ಗಾಗಿ ಅಲ್ಲ. ಬಂಜಾರ ಸಮಾಜ ಸಂಘಟನೆಯಾಗಬೇಕು. ಆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ತಾಂಡ ಅಭಿವೃದ್ದಿ ನಿಗಮದ ನಿರ್ದೇಶಕ ಗಿರೀಶ್ ಮಾತನಾಡಿ, ತಾಲ್ಲೂಕಿನ ಬೆನಕನಹಳ್ಳಿಯಲ್ಲಿ ಲಂಬಾಣಿ ಜನಾಂಗದ ಮತಾಂತರ ಹೆಚ್ಚಾಗುತ್ತಿದೆ. ಬಡ ವರ್ಗದ ಜನರಿಗೆ ಆಸೆ ಆಮಿಷಗಳನ್ನು ತೋರಿಸಿ ಮತಾಂತರಗೊಳಿಸಲಾಗುತ್ತಿದೆ. ಇಂತಹವರ ವಿರುದ್ದ ಕಾನೂನು ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಷ್ಟ್ರೀಯ ಗೋರ್ (ಬಂಜಾರ) ಮಳಾವ್ ಅಧ್ಯಕ್ಷ ಬಸವರಾಜ್ ಚೌವ್ಹಾಣ್, ಕರ್ನಾಟಕ ರಾಜ್ಯ ತಾಂಡ ಅಭಿವೃದ್ದಿ ನಿಗಮದ ನಿರ್ದೇಶಕ ಗಿರೀಶ್ ಸಿ. ಲಿಂಗ್ಯಾನಾಯ್ಕ ವೇದಿಕೆಯಲ್ಲಿದ್ದರು. ಚಂದ್ರನಾಯ್ಕ, ಜಯಸಿಂಹ ಕಾಟ್ರೋಚ್, ರವಿಕುಮಾರ್, ಉಮಾಪತಿ, ವೀರಭದ್ರ, ಚಂದ್ರನಾಯ್ಕ, ಜಯಣ್ಣ ಇನ್ನು ಮುಂತಾದವರು ಸಭೆಯಲ್ಲಿ ಹಾಜರಿದ್ದರು.