ಹೊಸದಿಗಂತ ವರದಿ ಮಡಿಕೇರಿ:
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಡಿಕೇರಿ ತಾಲೂಕಿನ ಹೆರವನಾಡು ಗ್ರಾಮದ ಉಡೋತ್ ಮೊಟ್ಟೆ ನಿವಾಸಿ ಅಭಿಲಾಷ್ ಅಲಿಯಾಸ್ ಅಭಿ ಕೆ.ಜೆ(29), ಮಕ್ಕಂದೂರು ನಿವಾಸಿ ಆಕಾಶ್ ಪಿ.ವಿ(20) ಹಾಗೂ ಸೋಮವಾರಪೇಟೆ ತಾಲೂಕಿನ ಹಾಲೇರಿ ನಿವಾಸಿ ಮಿಲನ್ ಎ.ಸಿ(21) ಬಂಧನಕ್ಕೊಳಗಾದವರಾಗಿದ್ದಾರೆ.

ಆರೋಪಿಗಳಿಂದ 2.136 ಕೆ.ಜಿ.ಗಾಂಜಾ ವಶಕ್ಕೆ
ಆರೋಪಿಗಳಿಂದ 2.136 ಕೆ.ಜಿ.ಗಾಂಜಾ, ಕೃತ್ಯಕ್ಕೆ ಬಳಸಿದ್ದ ಪಿಕಪ್ ವಾಹನ ಹಾಗೂ 1310ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಕುರಿತು ಬಂದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮಡಿಕೇರಿ ಉಪ ವಿಭಾಗ ಡಿವೈಎಸ್ಪಿ ಪಿ.ಎ.ಸೂರಜ್, ಮಡಿಕೇರಿ ಗ್ರಾಮಾಂತರ ಇನ್ಸ್ಪೆಕ್ಟರ್ ಹೆಚ್.ಎ.ಚಂದ್ರಶೇಖರ್, ಪಿಎಸ್ಐ ಗೋಪಾಲ್, ಎಎಸ್ಐ ಸಿ.ಯು.ಚರ್ಮಣ, ಸಿಬ್ಬಂದಿಗಳಾದ ಮಹೇಶ ಎಂ.ಕೆ., ರಾಯ್, ಯೋಗೇಶ್, ನಿರಂಜನ. ಎಂ.ಎನ್, ಪ್ರವೀಣ್.ಬಿ.ಕೆ, ರಾಜೇಶ್.ಸಿ.ಕೆ., ಬಿ.ಜೆ.ಶರತ್ ರೈ, ಚನ್ನಕೇಶವ, ರುದ್ರ, ಮಲ್ಲಿಕಾರ್ಜುನ, ಈರಪ್ಪ ವಠಾರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುರ್ತು ಸಹಾಯವಾಣಿ 112ಗೆ ಕರೆ ಮಾಡಿ
ಆರೋಪಿಗಳ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 20(b)(ii)(A) NDPS Act ಅಡಿಯಲ್ಲಿ ಪ್ರಕರಣ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಶ್ಲಾಘಿಸಿದ್ದಾರೆ.
ಯುವಕ-ಯುವತಿಯರು ಮಾದಕ ವ್ಯಸನಿಗಳಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಅವರು ಕೋರಿದ್ದಾರೆ.



