ಹೊಸದಿಗಂತ ವರದಿ, ಮಡಿಕೇರಿ:
ಕಳೆದ ಕೆಲವು ದಿನಗಳಿಂದ ವಾಹನ ಸಂಚಾರ ನಿಷೇಧಿಸಲ್ಪಟ್ಟಿದ್ದ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ-ತಾಳತ್’ಮನೆ ಜಂಕ್ಷನ್’ವರೆಗಿನ ಮಾರ್ಗವನ್ನು ಇದೀಗ ಲಘುವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಈ ಸಂಬಂಧ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅವರು ಆದೇಶ ಹೊರಡಿಸಿದ್ದಾರೆ.
ಅದರಂತೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಡಳಿತ ಭವನದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ 7+1 ಸೀಟರ್’ವರೆಗಿನ ವಾಹನಗಳು ದ್ವಿಮುಖವಾಗಿ ಸಂಚರಿಸಬಹುದಾಗಿದೆ.
ಉಳಿದಂತೆ 7+1 ಸೀಟರ್’ಗಿಂತ ಹೆಚ್ಚಿನ ಸಾಮರ್ಥ್ಯದ 4 ಚಕ್ರ ವಾಹನಗಳು ಮಂಗಳೂರು ಕಡೆಗೆ ಏಕಮುಖವಾಗಿ ಸಂಚರಿಸಬಹುದದಾಗಿದ್ದು, 7+1 ಸೀಟರ್’ಗಿಂತ ಹೆಚ್ಚಿನ ಸಾಮರ್ಥ್ಯದ 4 ಚಕ್ರ ವಾಹನಗಳು ಮಂಗಳೂರಿನಿಂದ ಮಡಿಕೇರಿ ಕಡೆಗೆ ಸಂಪಾಜೆ – ತಾಳತ್ತಮನೆ- ಮೇಕೇರಿ ಮಾರ್ಗವಾಗಿ ಏಕಮುಖವಾಗಿ ಸಂಚರಿಸಬಹುದೆಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
16.2 ಟನ್ ಒಳಪಟ್ಟ ಸರಕು ಸಾಗಣೆ ವಾಹನಗಳು, ಖಾಸಗಿ ಮತ್ತು ಕೆ.ಎಸ್ಆರ್ಟಿಸಿ ಬಸ್ಗಳು, ಅನಿಲ, ರಸಗೊಬ್ಬರ ಹಾಗೂ ಇಂಧನ ಸಾಗಣೆ ವಾಹನಗಳು ಎರಡೂ ರಸ್ತೆಗಳಲ್ಲಿ ಏಕಮುಖವಾಗಿ ಸಂಚರಿಸಬಹುದೆಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ