ಹೊಸದಿಗಂತ ವರದಿ ವಿಜಯಪುರ:
ಮಂಗಳೂರಿನಲ್ಲಿ ಬಿಜೆಪಿ ಮುಖಂಡನ ಹತ್ಯೆ ನಾಗರಿಕ ಸಮಾಜಕ್ಕೆ ಅಪಮಾನ. ಅಸಹಜ ಸಾವು ಯಾರಿಗಾದರೂ ನೋವು ತರುತ್ತದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣದ ಬಗ್ಗೆ ನನಗೆ ಸಂಫೂರ್ಣ ಮಾಹಿತಿ ಇಲ್ಲ. ಸಾವು ಸಾವೇ. ಅದು ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ಇರಲಿ ಜೀವ ಜೀವವೇ. ಹೀಗಾಗಿ ಈ ಬಗ್ಗೆ ತನಿಖೆಗೆ ಆಗ್ರಹಿಸುವೆ ಎಂದರು.
ಮೂರು ತಲೆ ಮಾರಿಗಾಗುವಷ್ಟು ಸಂಪಾದನೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಮಾಧ್ಯಮಗಳು ಅದನ್ನು ವಿವಾದಾತ್ಮಕವಾಗಿಸಿವೆ. ಸಂಪಾದನೆ ಎಂದರೆ ಹಣ ಅಷ್ಟೇ ಎಂದು ಏಕೆ ಭಾವಿಸುತ್ತೀರಿ ? ನಾನು ಕಾಂಗ್ರೆಸ್ ನಿಂದ ಮೂರು ಬಾರಿ ಶಾಸಕ, ಸಚಿವನಾಗಿದ್ದೇನೆ ಅಷ್ಟೆ ಅಲ್ಲ, ಸ್ಪೀಕರ್ ಸಹ ಆಗಿದ್ದೇನೆ. ಇದೆಲ್ಲ ಕಾಂಗ್ರೆಸ್ ನಮಗೆ ಕೊಟ್ಟಿದ್ದಲ್ಲವಾ? ಎಂದರು.
ನಾನು ನನ್ನ ಭಾಷಣದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತನಾಡಿದ್ದೇನೆ. ಗಾಂಧಿ, ನೆಹರು ಬಗ್ಗೆ ಮಾತನಾಡಿದ್ದೇನೆ. ಅದರಲ್ಲಿ ಕೇವಲ ಅದಷ್ಟನ್ನೇ ಕಟ್ ಆಂಡ್ ಪೇಸ್ಟ್ ಮಾಡಿದ್ದು, ಮಾಧ್ಯಮಗಳ ಕೆಲಸ ಎಂದು ದೂರಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ