ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ(Eknath Shinde)ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇಂದು ಅಯೋಧ್ಯೆಗೆ ಭೇಟಿ ನೀಡಿದ್ದು, ಈ ಕುರಿತು ಸಂಸದ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.
ಶಿಂದೆ ನಮ್ಮ ಜತೆ ಎಂದೂ ಅಯೋಧ್ಯೆಗೆ ಬಂದರಲಿಲ್ಲ, ಶ್ರೀರಾಮ ದೇಶದ್ರೋಹಿಗಳಿಗೆ ಎಂದೂ ಆಶೀರ್ವಾದ ಮಾಡುವುದಿಲ್ಲ ಎಂದಿದ್ದಾರೆ.
ನಮಗೂ ಶ್ರೀರಾಮನ ಮೇಲೆ ನಂಬಿಕೆ ಇದೆ, ನಾನು ಕೂಡ ಹಲವು ಬಾರಿ ಅಯೋಧ್ಯೆಗೆ ಹೋಗಿದ್ದೇನೆ. ಆಗ ನಮ್ಮೊಂದಿಗೆ ಯಾರೂ ಬಂದಿರಲಿಲ್ಲ, ಬಾಬ್ರಿ ವಿಚಾರ ಬಂದಾಗ ಓಡಿ ಹೋಗಿ ಈಗ ದೇಶದ್ರೋಹಿಗಳ ಹಿಂದೆ ಹೋಗುತ್ತಿದ್ದಾರೆ. ಅಂತವರಿಗೆ ಶ್ರೀರಾಮನ ಆಶೀರ್ವಾದ ಸಿಗುವುದಿಲ್ಲ. ಮುಂಬೈಗೆ ಮರಳಿದ ಬಳಿಕ ಸರ್ಕಾರದ ಪರಿಸ್ಥಿತಿ ಏನಾಗುತ್ತದೆ ನೋಡುತ್ತಿರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆಯಾಗಿದೆ, ಆಲಿಕಲ್ಲು ಮಳೆಯಾಗಿ ರೈತರ ಪರಿಸ್ಥಿತಿ ಹದಗೆಟ್ಟಿದೆ, ರೈತರು ಅಳಲು ತೋಡಿಕೊಂಡಿದ್ದಾರೆ. ಈ ಪರಿಸ್ಥಿತಿಯನ್ನು ನಿಭಾಯಿಸುವ ಬದಲು ಮುಖ್ಯಮಂತ್ರಿ ಆಯೋಧ್ಯೆಗೆ ತೆರಳಿದ್ದಾರೆ ಎಂದರು.
ಜೂನ್ 2022 ರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮತ್ತು ಚುನಾವಣಾ ಆಯೋಗವು ಅವರ ನೇತೃತ್ವದ ಬಣಕ್ಕೆ ಶಿವಸೇನೆಯ ಮೂಲ ಚಿಹ್ನೆ ಬಿಲ್ಲು ಮತ್ತು ಬಾಣ ಪಡೆದ ನಂತರ ಶಿಂಧೆ ಅವರು ಮೊದಲ ಬಾರಿಗೆ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ನಿರ್ಮಾಣ ಹಂತದಲ್ಲಿರುವ ರಾಮಮಂದಿರದಲ್ಲಿ ಮಹಾ ಆರತಿಯಲ್ಲಿ, ನಂತರ ಸಂಜೆ ಶರಾಯು ನದಿಯಲ್ಲಿ ಮಹಾ ಆರತಿಯಲ್ಲಿ ಭಾಗವಹಿಸಲಿದ್ದಾರೆ.