ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕಿತ್ತೂರು ಕರ್ನಾಟಕ ಭಾಗದ ಜನರ ಬಹುದಿನದ ಕನಸಾಗಿರುವ ಮಹದಾಯಿ (ಕಳಸಾ-ಬಂಡೂರಿ) ಯೋಜನೆಗೆ ಮತ್ತೆ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್ನಲ್ಲಿರುವ ಪ್ರಕರಣ ಸಂಪೂರ್ಣ ಇತ್ಯರ್ಥವಾಗುವವರೆಗೆ ಯೋಜನೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದರಿಂದ ದಶಕಗಳಿಂದ ಕಾಯುತ್ತಿರುವ 13 ಪಟ್ಟಣಗಳು ಹಾಗೂ ನೂರಾರು ಹಳ್ಳಿಗಳ ಜನರಲ್ಲಿ ತೀವ್ರ ನಿರಾಶೆ ಉಂಟಾಗಿದೆ.
ಮಂಡಳಿಯ ಆದೇಶ ಮತ್ತು ಗೋವಾದ ತಗಾದೆ
2010ರಲ್ಲಿ ರಚನೆಯಾದ ಮಹದಾಯಿ ಜಲವಿವಾದ ನ್ಯಾಯಾಧಿಕರಣವು 2018ರಲ್ಲಿ ಅಂತಿಮ ತೀರ್ಪು ನೀಡಿ, ಕರ್ನಾಟಕಕ್ಕೆ 13.42 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು. ಇದರ ಆಧಾರದ ಮೇಲೆ ರಾಜ್ಯ ಸರ್ಕಾರ ಯೋಜನಾ ವರದಿ (DPR) ಸಿದ್ಧಪಡಿಸಿದರೂ, ಕೇಂದ್ರ ಪರಿಸರ ಇಲಾಖೆ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಇನ್ನೂ ಸಿಕ್ಕಿಲ್ಲ. ಯೋಜನೆ ಜಾರಿಗೆ ತರದಂತೆ ಗೋವಾ ಸರ್ಕಾರ ನಿರಂತರವಾಗಿ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದು, ನ್ಯಾಯಾಲಯದಲ್ಲೂ ಅರ್ಜಿ ಸಲ್ಲಿಸಿದೆ.
ಕುಡಿಯುವ ನೀರಿನ ಅಭಾವ ಮತ್ತು ಸಾರ್ವಜನಿಕರ ಆಕ್ರೋಶ
ಜನಪ್ರತಿನಿಧಿಗಳ ಹಾಗೂ ಆಳುವ ವರ್ಗದ ನಿರ್ಲಕ್ಷ್ಯದಿಂದಾಗಿ ಯೋಜನೆ ವಿಳಂಬವಾಗುತ್ತಿದೆ ಎಂಬುದು ಸ್ಥಳೀಯರ ಆರೋಪ. ಕೋರ್ಟ್ ವ್ಯಾಜ್ಯ ನೆಪವೊಡ್ಡಿ ಪ್ರಕ್ರಿಯೆ ಪ್ರಗತಿ ಕಾಣದಿರುವುದು ಉತ್ತರ ಕರ್ನಾಟಕದ ಜನರನ್ನು ಕಂಗಾಲುಗೊಳಿಸಿದೆ. ಕುಡಿಯುವ ನೀರು ಮತ್ತು ನೀರಾವರಿಗಾಗಿ ನದಿ ನೀರು ಹರಿದು ಬರುವ ಹಾದಿಯನ್ನು ಲಕ್ಷಾಂತರ ಜನರು ಕಾತರದಿಂದ ಕಾಯುತ್ತಿದ್ದಾರೆ.



