ಹೊಸದಿಗಂತ ವರದಿ ಹುಬ್ಬಳ್ಳಿ:
ರಾಣಿ ಚನ್ನಮ್ಮ ಮೈದಾನ ಉತ್ಸವ ಮಹಾಮಂಡಳಿ ವತಿಯಿಂದ ನಗರದ ರಾಣಿ ಚನ್ನಮ್ಮ ಮೈದಾನದ ಗಣೇಶೋತ್ಸವ ಅಂಗವಾಗಿ ಬುಧವಾರ ಮಹಾಗಣಪತಿ ಯಾಗ ಮಾಡಲಾಗುತ್ತಿದೆ.
ಪುರೋಹಿತರ ಸಮ್ಮುಖದಲ್ಲಿ ರಾಣಿ ಚನ್ನಮ್ಮ ಮೈದಾನ ಉತ್ಸವ ಮಹಾಮಂಡಳಿ ಅಧ್ಯಕ್ಷ ಸಂಜೀವ ಬಡಸ್ಕರ್ ಅವರು ದಂಪತಿಗಳ ಸಮೇತ ಮಹಾಗಣಪತಿ ಯಾಗದಲ್ಲಿ ಭಾಗವಹಿಸಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು.
ನಗರದ ಹಾಗೂ ವಿವಿಧ ಜಿಲ್ಲೆಗಳಿಂದ ಸಾರ್ವಜನಿಕರು ಬಂದು ಸಾಲಿನಲ್ಲಿ ನಿಂತು ಗಣಪತಿ ದರ್ಶನ ಪಡೆಯುವುದು ಸಾಮಾನ್ಯವಾಗಿತ್ತು. ಮೈದಾನದಲ್ಲಿ ಪ್ರಸಾದ ವ್ಯವಸ್ಥೆ ಸಹ ಮಾಡಲಾಗಿದ್ದು, ಭಕ್ತರು ಪ್ರಸಾದ ಸೇವಿಸಿದರು. ಶ್ರೀನಂದನ ಸಂಗೀತ ಶಾಲೆ ದೇಶಪಾಂಡೆ ನಗರದ ನೀಶಾ ಭಟ್ ಹಾಗೂ ಸಗಡಿಗರಿಂದ ಗಣಪತಿ ಭಜನೆ ನಡೆಸಲಾಯಿತು. ಬೆಳಿಗ್ಗೆ ಮಹಾಮಂಡಳಿಯ ಸದಸ್ಯರು ಹಾಗೂ ಪತಂಜಲಿ ಯೋಗ ಕೇಂದ್ರದ ವತಿಯಿಂದ ಯೋಗ ಹಾಗೂ ಭಜನೆ ಮಾಡಲಾಯಿತು.
ಸಂಜೆ ಕಾರ್ಯಕ್ರಮ: ಸಂಜೆ 4 ಗಂಟೆಗೆ ಭಜನೆ, ವಾರ್ಕರಿ ಸಂಪ್ರದಾಯದಂತೆ ಭಜನೆ, ಸಂಜೆ 6 ಗಂಟೆಗೆ ಮಹಾ ಪೂಜೆ ನಡೆಯಲಿದೆ. 7 ಗಂಟೆಗೆ ಗಂಗಾಆರತಿ, 8 ಗಂಟೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಿಂದ ಘೋಶ್ ವಾದನ ನಡೆಯಲಿದೆ.
ಡಿಸಿಪಿ ಕಾನೂನು ಸುವ್ಯವಸ್ಥೆ ರಾಜೀವ ಎಂ., ನೇತೃತ್ವದಲ್ಲಿ ಮೈದಾನದಲ್ಲಿ ಬಂದೋ ಬಸ್ತ್ ಮಾಡಲಾಗಿದೆ. ಎಸಿಪಿಗಳಾದ ಮಲ್ಲಪ್ಪ ನಂದಗಾವಿ, ಆರ್.ಕೆ. ಪಾಟೀಲ ಸ್ಥಳದಲ್ಲಿ ಬಿಡುಬಿಟ್ಟಿದ್ದಾರೆ.