ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವು ತಲಾ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ.
ಬಿಜೆಪಿಯ ರಾಮ್ ಶಿಂಧೆ, ಉಮಾ ಖಪ್ರೆ, ಶ್ರೀಕಾಂತ್ ಭಾರ್ತಿಯಾ ಮತ್ತು ಪ್ರವೀಣ್ ದಾರೆಕರ್ ಅವರು ಎನ್ಸಿಪಿ ನಾಯಕರಾದ ಏಕನಾಥ್ ಖಾಡ್ಸೆ ಮತ್ತು ರಾಮರಾಜೇ ನಾಯ್ಕ್ ನಿಂಬಾಳ್ಕರ್ ಗೆಲುವಿನ ನಗೆ ಬೀರಿದ್ದಾರೆ. ಶಿವಸೇನಾ ಅಭ್ಯರ್ಥಿಗಳಾದ ಅಮ್ಶ್ಯ ಪದ್ವಿ ಮತ್ತು ಸಚಿನ್ ಅಹಿರ್ ಕೂಡ ಗೆಲುವು ಸಾಧಿಸಿದ್ದಾರೆ. ಇವರೊಂದಿಗೆ ಮುಂಬೈ ಕಾಂಗ್ರೆಸ್ ನ ಮುಖ್ಯಸ್ಥ ಭಾಯ್ ಜಗತಾಪ್ ಕೂಡ ಪರಿಷತ್ ಗೆ ಆಯ್ಕೆಯಾಗಿದ್ದಾರೆ.
10 ಎಂಎಲ್ಸಿ ಸ್ಥಾನಗಳಿಗೆ ಎಂವಿಎ (ಮಹಾರಾಷ್ಟ್ರ ವಿಕಾಸ ಅಘಾಡ) ಆರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಬಿಜೆಪಿ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಸಂಖ್ಯಾಬಲದ ಕೊರತೆಯ ನಡುವೆಯೂ ಬಿಜೆಪಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್, “ನಾವು ಎಲ್ಲಾ ಐವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ, ರಾಜ್ಯಸಭೆಯಲ್ಲಿ ಬಿಜೆಪಿ 123 ಮತಗಳನ್ನು ಪಡೆದಿದೆ, ಪರಿಷತ್ ಚುನಾವಣೆಯಲ್ಲಿ ನಾವು 134 ಮತಗಳನ್ನು ಪಡೆದಿದ್ದೇವೆ, ನಮ್ಮ 5 ನೇ ಅಭ್ಯರ್ಥಿಗೆ ಮತಗಳು ಇರಲಿಲ್ಲ, ಆದರೆ ಅವರು ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಪಡೆದರು” ಎಂದು ಪ್ರತಿಕ್ರಿಯಿಸಿದ್ದಾರೆ.
ಮಾಹಾರಾಷ್ಟ್ರ ವಿಧಾನ ಸಭೆಯಲ್ಲಿ ಬಿಜೆಪಿ 106 ಶಾಸಕರನ್ನು ಹೊಂದಿದ್ದು ಉಳಿದ ಸ್ವತಂತ್ರ ಶಾಸಕರು ಹಾಗೂ ಸಣ್ಣ ಪಕ್ಷಗಳಿಂದ ಬಿಜೆಪಿಗೆ ಮತಗಳು ಜಾರಿವೆ ಎನ್ನಲಾಗಿದೆ.