ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ಮಹಾತ್ಮ ಗಾಂಧಿಜೀಯವರ ಕಂಚಿನ ಪುತ್ಥಳಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿದ್ದು, ಭಾರತ ಈ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಈ ಕುರಿತು X ಖಾತೆಯಲ್ಲಿ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಪೋಸ್ಟ್ ಮಾಡಿದ್ದು , ‘ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿರುವ ರೋವಿಲ್ಲಾ ಪ್ರದೇಶದಲ್ಲಿನ ಭಾರತೀಯ ಸಮುದಾಯದ ಸೆಂಟರ್ ಬಳಿ ಇದ್ದ ಮಹಾತ್ಮ ಗಾಂಧಿಜೀಯವರ ಕಂಚಿನ ಪುತ್ಥಳಿಯನ್ನು ಅಪರಿಚಿತರು ಧ್ವಂಸಗೊಳಿಸಿ, ತೆಗೆದು ಹಾಕಿರುವ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಶೀಘ್ರವೇ ಈ ದುಷ್ಕೃತ್ಯ ಎಸಗಿರುವ ಆರೋಪಿಗಳನ್ನು ಆಸ್ಟ್ರೇಲಿಯಾದ ಆಡಳಿತದ ಅಧಿಕಾರಿಗಳು ಬಂಧಿಸಿ, ಆ ವಿಗ್ರಹವನ್ನು ಮರಳಿ ಪಡೆಯುವುದರ ಜೊತೆಗ ಅವರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದೆ .
ಆಸ್ಟ್ರೇಲಿಯಾದ ಸುದ್ದಿ ಸಂಸ್ಥೆ ಪ್ರಕಾರ, ಸೋಮವಾರ(ಫೆ.2) ಮಧ್ಯರಾತ್ರಿ 12:50ರ ಸುಮಾರಿಗೆ 3 ಜನ ಅಪರಿಚಿತ ವ್ಯಕ್ತಿಗಳು ಆಂಗಲ್ ಗ್ರೈಂಡರ್ ಎಂಬ ವಸ್ತುವನ್ನು ಬಳಸಿ ಸುಮಾರು 426 ಕೆ.ಜಿ ತೂಕದ ಪ್ರತಿಮೆಯ ಕಾಲುಗಳನ್ನು ಕತ್ತರಿಸಿ ಕದ್ದುಕೊಂಡು ಹೋಗಿದ್ದಾರೆ.
ಘಟನೆ ಸಂಬಂಧ ವಿಕ್ಟೋರಿಯಾ ಪೊಲೀಸ್ ನಾಕ್ಸ್ ಅಪರಾಧ ತನಿಖಾ ಘಟಕದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು,ಕಂಚಿನ ಪ್ರತಿಮೆಯನ್ನು ಮಾರಾಟ ಮಾಡಲು ಪ್ರಯತ್ನಿಸುವ ಸಾಧ್ಯತೆಯಿದ್ದು, ಸ್ಕ್ರ್ಯಾಪ್ ಮೆಟಲ್ ವ್ಯಾಪಾರಿಗಳಿಗೆ ಯಾರಾದರೂ ಹೀಗೆ ಮಾರಾಟ ಮಾಡುವುದಕ್ಕೆ ಬಂದಲ್ಲಿ ಅಥವಾ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಗಮನಕ್ಕೆ ಬಂದ ತಕ್ಷಣವೇ ವರದಿ ಮಾಡಲು ಎಚ್ಚರಿಕೆ ನೀಡಿದ್ದಾರೆ.



