ಹೊಸದಿಗಂತ ವರದಿ ಕಲಘಟಗಿ:
ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆಯಾಗಿದ್ದು, ಕಲಘಟಗಿ ತಾಲೂಕು ಈ ಪಟ್ಟಿಯಲ್ಲಿಯೇ ಇಲ್ಲ, ಸೋಯಾಬೀನ್, ಗೋವಿನಜೋಳ ಸರಿ ಬೆಳೆದಿಲ್ಲ, ಹೀಗಿದ್ದೂ ಬರ ಘೋಷಣೆ ಮಾಡದಿದ್ದರೆ ಬೃಹತ್ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಮುಖಂಡ, ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ ಗುಡುಗಿದರು.
ಅವರು ದಾಸ್ತಿಕೊಪ್ಪ ಪ್ರವಾಸಿಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಾಡ್ ಅವರು ಎಷ್ಟು ರೈತರ ಜೊತೆ ಮಾತನಾಡಿದ್ದಾರೆ, ಎಷ್ಟು ರೈತರ ಕೋರಿಕೆ ಕೇಳಿದ್ದಾರೆ, ಬರಿ ಫೋಟೊಗೋಸ್ಕರ ಪೋಸು ನೀಡುವ ಮಂತ್ರಿಯಾಗಿದ್ದಾರೆ, ರೈತರ ಬಗ್ಗೆ ಏನು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು. ರೈತರ ಜೊತೆಗಿದ್ದು ರೈತರ ಸಮಸ್ಯೆಗೆ ಪರಿಹಾರ ನೀಡಿ ಎಂದರು.
ಇದನ್ನೂ ಓದಿ:
ಚುನಾವಣೆ ಸಮೀಪ ಬಂದಿದ್ದಕ್ಕೆ ಪ್ರಜಾ ಸೇವಾ ಆಂದೋಲನ ಆಯೋಜಿಸಿದ್ದು, ನೀವು ಸಂಪುಟದಲ್ಲಿ ಪ್ರಭಾವಿ ಸಚಿವ ಎಂದು ಹೆಸರು ಗಳಿಸಿದ್ದೀರಿ. ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಗಳಿಲ್ಲ, ಕೈಗಾರಿಕಾ ಎಸ್ಟೇಟ್ ಇಲ್ಲ ಏನು ಅಭಿವೃದ್ಧಿ ಆಗಿದೆ ? ಸಕ್ಕರೆ ಕಾರ್ಖಾನೆ ಹಾಕುವ ವಿಚಾರ ಏನಾಯ್ತು ಎಂದು ಪ್ರಶ್ನಿಸಿದರು. ನೀವು ವ್ಯಾಪಾರಿ ಮನೋಭಾವದ ಸಚಿವರಾಗಿದ್ದೀರಿ. ಜನಪರ ಕಾಳಜಿ ನಿಮ್ಮಲ್ಲಿ ಇಲ್ಲ. ಕೆರೆ ತುಂಬಿಸುವ ಯೋಜನೆ ನೆನೆಗುದಿಗೆ ಬಿದ್ದಿದೆ. ಕ್ಷೇತ್ರಕ್ಕೆ ಯಾವುದೇ ದೀರ್ಘಾವಧಿ ಯೋಜನೆಗಳಿಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕು ಅಧ್ಯಕ್ಷ ಯಲ್ಲಾರಿ ಶಿಂಧೆ, ಮಾಂತೇಶ ತಹಶೀಲ್ದಾರ, ಐ ಸಿ ಗೋಕುಲ, ಬಸವರಾಜ ಶೆರೆವಾಡ, ಸಂತೋಷ್ ಮಾದನಭಾವಿ, ಸೋಮು ಕೊಪ್ಪದ, ಆನಂದ ಕಡ್ಲಾಸ್ಕರ, ಬಸವರಾಜ ಹೊನ್ನಿಹಳ್ಳಿ, ಪುಂಡಲೀಕ ಜಾಧವ, ಗುಡುಖಾನ ಮಿಠಾಯಿಗಾರ್, ರಾಘು ಅಳ್ನಾವರ ಇತರರಿದ್ದರು.



