ಹೊಸದಿಗಂತ ವರದಿ ಕಾಸರಗೋಡು:
ಜಿಲ್ಲೆಯ ಪ್ರಸಿದ್ಧ ದೇವಿ ಕ್ಷೇತ್ರಗಳಲ್ಲಿ ಒಂದಾದ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ಧಾರ್ಮಿಕ ಮುಖಂಡ ಆನೆಮಜಲು ವಿಷ್ಣು ಭಟ್ (65) ಮಂಗಳವಾರ ರಾತ್ರಿ ಆನೆಮಜಲು ಸ್ವಗೃಹದಲ್ಲಿ ವಿಧಿವಶರಾದರು. ಅವರು ಅಲ್ಪಕಾಲದ ಅಸೌಖ್ಯದಿಂದಿದ್ದರು.
ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ವಲಯಗಳ ಮುಂದಾಳು ಆಗಿದ್ದ ಅವರು ಜನಾನುರಾಗಿಯಾಗಿದ್ದರು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಅಭಿವೃದ್ಧಿಗೆ ಅಹರ್ನಿಶಿ ಸೇವೆ ಸಲ್ಲಿಸಿದ್ದರು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ಶಾಲೆಯ ಮೆನೇಜರ್, ಪೆರ್ಲ ನಾಲಂದ ವಿದ್ಯಾಲಯದ ಪ್ರಮುಖರಾಗಿದ್ದರು. ಅಲ್ಲದೆ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವೆ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶ್ರೀಯುತರ ಅಂತ್ಯ ಸಂಸ್ಕಾರವು ಬುಧವಾರ ಬೆಳಗ್ಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಲಿದೆ.