ಹೊಸದಿಗಂತ ವರದಿ,ಮಂಗಳೂರು:
ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ಕೋರ್ಟ್ನಲ್ಲಿ ಹೈಕೋರ್ಟ್ ಆದೇಶದ ಆಧಾರದಂತೆ ಮಂಗಳವಾರ ವಿಚಾರಣೆ ನಡೆದಿದ್ದು, ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜೂ.17ಕ್ಕೆ ಮುಂದೂಡಲಾಗಿದೆ.
ಮಳಲಿ ಮಸೀದಿ ವಿಚಾರಣೆಗೆ ಸಂಬಂಧಿಸಿ ಯಾವುದೇ ಆದೇಶ ನೀಡುವಂತಿಲ್ಲ ಎಂದು ಮಂಗಳೂರಿನ ಹೆಚ್ಚುವರಿ ಸಿವಿಲ್ ಕೋರ್ಟ್ಗೆ ಹೈಕೋರ್ಟ್ ಸೋಮವಾರ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಕೋರ್ಟ್ನ ಮುಂದಿನ ವಿಚಾರಣೆ ಬಗ್ಗೆ ಕುತೂಹಲ ಮೂಡಿತ್ತು.
ಮಂಗಳವಾರ ವಿಹಿಂಪ ಪರ ವಕೀಲ ಚಿದಾನಂದ ಕೆದಿಲಾಯ ಅವರು ಪ್ರಮುಖ ದಾಖಲೆಗಳನ್ನು ಕೋರ್ಟ್ಗೆ ಸಲ್ಲಿಸಿದರು. ವಿವಾದಿತ ಮಸೀದಿಯಲ್ಲಿ ಪುರಾತನ ಹಿಂದು ದೇವಾಲಯ ಕುರುಹು ಪತ್ತೆಯಾಗಿದೆ. ಆದ್ದರಿಂದ ಈ ವಿಚಾರಣೆಯನ್ನು ವಕ್ಫ್ ಟ್ರಿಬ್ಯುನಲ್ ವ್ಯಾಪ್ತಿಯಲ್ಲಿ ನಡೆಸಲು ಸಾಧ್ಯವಿಲ್ಲ. ಕೇವಲ ಸಿವಿಲ್ ಕೋರ್ಟ್ಗಳಲ್ಲಿ ಮಾತ್ರ ವಿಚಾರಣೆ ನಡೆಸಬಹುದಾಗಿದೆ ಎಂದು ಆದೇಶವೊಂದರ ದಾಖಲೆಯನ್ನು ಸಲ್ಲಿಸಿದರು.