ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಸಾಮಾಜಿಕ ಮಾದ್ಯಮದಲ್ಲಿ ಬೆಂಬಲಿಸಿದ್ದಕ್ಕಾಗಿ 23 ವರ್ಷದ ವ್ಯಕ್ತಿಯೊಬ್ಬನ ಮೇಲೆ ದುಷ್ಕರ್ಮಿಗಳ ಗುಂಪೊಂದು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದು ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೋಲೀಸರು ತಿಳಿಸಿರುವುದಾಗಿ ಮೂಲಗಳು ವರದಿ ಮಾಡಿವೆ. ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಈ ಸಂಬಂಧ ಪೋಲೀಸರು ತನಿಖೆ ನಡೆಸುತ್ತಿದ್ದು ನಾಲ್ವರನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ. ವ್ಯಕ್ತಿಯನ್ನು ಪ್ರತೀಕ್ ಅಲಿಯಾಸ್ ಸನ್ನಿ ರಾಜೇಂದ್ರ ಪವಾರ್ ಎಂದು ಗುರುತಿಸಲಾಗಿದ್ದು, ಆತನ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಹ್ಮದ್ನಗರ ಜಿಲ್ಲಾ ಕೇಂದ್ರದಿಂದ 222 ಕಿಮೀ ದೂರದಲ್ಲಿರುವ ಕರ್ಜತ್ ಪಟ್ಟಣದ ಅಕ್ಕಬಾಯಿ ಚೌಕ್ನಲ್ಲಿರುವ ಮೆಡಿಕಲ್ ಶಾಪ್ ಎದುರು ಗುರುವಾರ ಸಂಜೆ ಪವಾರ್ ಮೇಲೆ ಕನಿಷ್ಠ 14 ಮಂದಿ ಮುಸ್ಲಿಂ ಸಮುದಾಯದ ಜನರು ಕತ್ತಿ, ಕುಡುಗೋಲು, ದೊಣ್ಣೆ, ಹಾಕಿ ಸ್ಟಿಕ್ಗಳಿಂದ ಹಲ್ಲೆ ನಡೆಸಿದ್ದಾರೆ. ಪ್ರಕರಣದ ದೂರುದಾರರಾದ ಪವಾರ್ ಮತ್ತು ಅಮಿತ್ ಮಾನೆ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗಿ ಮೆಡಿಕಲ್ ಶಾಪ್ ಬಳಿ ಸ್ನೇಹಿತನಿಗಾಗಿ ಕಾಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ವರದಿ ಮಾಡಿವೆ.