ಹೊಸದಿಗಂತ ವರದಿ ಗದಗ:
ಅನೈತಿಕ ಸಂಬಂಧ ಹಿನ್ನೆಲೆ ವ್ಯಕ್ತಿಯೋರ್ವನ ಭೀಕರ ಕೊಲೆ ಮಾಡಿದ ಘಟನೆ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ್ ಬಡ್ನಿ ಗ್ರಾಮದಲ್ಲಿ ನಡೆದಿದೆ.
34 ವರ್ಷದ ಈರಣ್ಣ ಅಗಸಿಬಾಗಿಲು ಮೃತ ದುರ್ದೈವಿ. ಸ್ಥಳಿಯ ರೇಣುಕಾ ಎಂಬ ಯುವತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಹೇಳಲಾಗಿದೆ. ರೇಣುಕಾಗೆ ಈಗಾಗಲೇ ಮದುವೆಯಾಗಿದ್ದರೂ ಕಳೆದ ಎರಡು ವರ್ಷದಿಂದ ಇಬ್ಬರು ಪ್ರೀತಿಸುತ್ತಿದ್ದರು. ಈ ವಿಷಯ ಮನೆಯವರಿಗೆ ಗೊತ್ತಾಗಿ ಒಂದರೆಡು ಬಾರಿ ಈರಣ್ಣನ ಮನೆಯವರಿಗೆ ವಿಷಯ ತಿಳಿಸಿದ್ದರು. ಸಂಸಾರವನ್ನು ಉಳಿಸಿಕೊಡಿ ಎಂದು ಮನವಿ ಮಾಡಿದ್ದರು. ಆದರೂ ಇಬ್ಬರೂ ಕದ್ದು ಮುಚ್ಚಿ ಭೇಟಿಯಾಗುತ್ತಿದ್ದರು. ನಿನ್ನೆ ಈರಣ್ಣ ಹಾಗೂ ರೇಣುಕಾ ಇಬ್ಬರು ಜೊತೆಗಿದ್ದ ವೇಳೆ ಕುಟುಂಬಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಸಿಟ್ಟಿನಲ್ಲಿದ್ದ ರೇಣುಕಾ ಪತಿ ಆಂಜನೇಯ ಕಳಸಾಪೂರ ಈರಣ್ಣನ ತಲೆಗೆ ಕಬ್ಬಿಣದ ರಾಡ್, ಕಟ್ಟಿಗೆ ಹಾಗೂ ಕಟ್ಟಿಗೆಯ ಹಲಗೆಯಿಂದ ಬಲವಾಗಿ ಹೊಡೆದಿದ್ದಾರೆ. ರೇಣುಕಾ ಪತಿ ಆಂಜನೇಯ ಕಳಸಾಪೂರ, ರೇಣುಕಾಳ ತಾಯಿ ಹನುಮವ್ವ ಭೋವಿ ಹಾಗೂ ಸಹೋದರ ಧರ್ಮರಾಜ್ ಭೋವಿ ಈ ನಾಲ್ವರು ಸೇರಿ ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದ ನಂತರ ಈರಣ್ಣ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದಾರೆ. ವಿಚಾರಣೆ ವೇಳೆ ಭಯದಲ್ಲಿ ಸತ್ಯ ಬಾಯ್ಬಿಟ್ಟಿದ್ದು, ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



