ಹೊಸದಿಗಂತ ವರದಿ ಸುಳ್ಯ:
ಇಲ್ಲಿನ ಜಾಲ್ಸೂರು ಗ್ರಾಮದ ವಿನೋಬಾನಗರದಲ್ಲಿ ಬಸ್ನಿಂದ ಇಳಿದು ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದು, ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಪ್ರಾಥಮಿಕ ತನಿಖೆಯಲ್ಲಿ ಪುತ್ತೂರು ತಾಲೂಕಿನ ಕೋಡಿಪ್ಪಾಡಿ ನಿವಾಸಿ ದೀಪಕ್ ಎಂದು ಗುರುತಿಸಲಾಗಿದೆ.
ಇವರು ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಲಾರಿ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ರಸ್ತೆಗೆಸೆಯಲ್ಪಟ್ಟಿದ್ದು, ಲಾರಿಯ ಚಕ್ರಕ್ಕೆ ಸಿಲುಕಿ ತಲೆಯ ಮೇಲ್ಬಾಗ ಮತ್ತು ಮುಖ ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. ಇದರಿಂದಾಗಿ ಮೃತಪಟ್ಟ ವ್ಯಕ್ತಿ ಯಾರು ಎಂದು ಗುರುತಿಸುವುದು ಕಷ್ಟವಾಗಿತ್ತು. ಬಳಿಕ ವ್ಯಕ್ತಿಯ ಬಳಿಯಲ್ಲಿದ್ದ ವಸ್ತುಗಳ ಆಧಾರದಲ್ಲಿ ಗುರುತು ಪತ್ತೆ ಮಾಡಲಾಗಿದೆ.
ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.



