ಮನೆಯಂಗಳದ ಬಳಿ ನಿಂತಿರುವಾಗ ಏಕಾಏಕಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಹೊಸದಿಗಂತ ವರದಿ ಮಡಿಕೇರಿ:

ಗುರುವಾರ ಬೆಳಗ್ಗೆ ಪಾಲಿಬೆಟ್ಟದ ಎಮ್ಮೆಗುಂಡಿ ತೋಟದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯನ್ನು ಕಾಡಾನೆ ತುಳಿದು ಸಾಯಿಸಿರುವ ಘಟನೆ ಮರೆಯಾಗುವ ಮುನ್ನವೇ ಶುಕ್ರವಾರ ಬೆಳಗಿನ ಜಾವ ಮತ್ತೊಂದು ದುರಂತ ಸಂಭವಿಸಿದೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ಜಯಂತ್ ಎಂಬವರ ತಂದೆ, ಕರಡಿಗೋಡು ಬಸವನಹಳ್ಳಿ ಹಾಡಿ ಸಮೀಪದ ನಿವಾಸಿ, ಕಾಫಿ ಬೆಳೆಗಾರ ಸುಳ್ಯಕೋಡಿ ಚಿಣ್ಣಪ್ಪ (76) ಎಂಬವರೇ ಕಾಡಾನೆಯ ದಾಳಿಗೆ ಬಲಿಯಾದ ಮತ್ತೋರ್ವ ದುರ್ದೈವಿ.

ಶುಕ್ರವಾರ ಬೆಳಗಿನ ಜಾವ 1:30ಕ್ಕೆ ತನ್ನ ಮನೆಯ ಬಳಿ ಆನೆ ಇರುವ ಸಂಶಯದಿಂದ ಹೊರಗೆ ಬಂದ ಚಿಣ್ಣಪ್ಪ, ಮನೆಯಂಗಳದ ಬಳಿ ನಿಂತಿರುವಾಗ ಏಕಾಏಕಿ ಹಿಂದಿನಿಂದ ಬಂದ ಕಾಡಾನೆ ದಾಳಿ ನಡೆಸಿದೆ. ಅಚಾನಕ್ಕಾಗಿ ಹಿಂದಿನಿಂದ ಇವರತ್ತ ನುಗ್ಗಿದ ಕಾಡಾನೆಯ ದಾಳಿಯ ರಭಸಕ್ಕೆ 76 ವರ್ಷ ಪ್ರಾಯದ ಚಿನ್ನಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿದ ಕೂಡಲೇ ದೂರವಾಣಿ ಮೂಲಕ ಬೆಂಗಳೂರಿನಲ್ಲಿದ್ದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮಾಹಿತಿ ನೀಡಿದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಸ್ಥಳಕ್ಕೆ ಧಾವಿಸಿ, ಅಗತ್ಯ ಕ್ರಮಕೈಗೊಳ್ಳಲು ನೆರವಾಗಿದ್ದಾರೆ. ವಲಯ ಅರಣ್ಯಾಧಿಕಾರಿ ರತನ್, ಕಾಂಗ್ರೆಸ್ ಮುಖಂಡ ಪ್ರದೀಶ್, ಸಿದ್ದಾಪುರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!