ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಸೆಮಣೆ ಏರಬೇಕಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ನಿಂಗಪ್ಪ ಬೂದಪ್ಪ ನವಲೂರ (28) ಕೊಲೆಯಾದ ವ್ಯಕ್ತಿ. ತೋಟದ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಕಣ್ಣಿಗೆ ಖಾರದಪುಡಿ ಎರಚಿ, ಕತ್ತು ಹಿಸುಕಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ನಿಂಗಪ್ಪ ಜೂನ್ 7 ರಂದು ಹಸೆ ಮಣೆ ಏರಬೇಕಿತ್ತು. ತಾವರಗೆರೆ ಗ್ರಾಮದ ಯುವತಿ ಜೊತೆ ಮದುವೆ ನಿಶ್ಚಿಯವಾಗಿತ್ತು. ಮದುವೆ ದಿನ ಹತ್ತಿರ ಬಂದಿದ್ದರಿಂದ ನಿಂಗಪ್ಪ ಅವರ ಮನೆಯಲ್ಲಿ ಎಲ್ಲ ತಯಾರಿಗಳು ನಡೆಯುತ್ತಿದ್ದವು. ಆದರೆ, ಇದೀಗ ನಿಂಗಪ್ಪನ ಹತ್ಯೆಯಾಗಿರುವುದು ಕುಟುಂಬಕ್ಕೆ ಭಾರೀ ಆಘಾತವಾಗಿದೆ. ಮಗನನ್ನು ಕಳೆದುಕೊಂಡ ಪೋಷಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಕೊಲೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.