ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀರಾಮ ನವಮಿಯ ಹಬ್ಬದ ದಿನ ಮಧ್ಯಪ್ರದೇಶದ ಖಾರ್ಗೋನೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಶೋಭಯಾತ್ರೆ ವೇಳೆ ಕಲ್ಲು ತೂರಾಟ ನಡೆಸಲಾಗಿತ್ತು. ಸ್ಥಳದಲ್ಲಿ ಎರಡು ಬಣಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಖಾರ್ಗೋಣೆ ಎಸ್ಪಿ ಸಿದ್ಧಾರ್ಥ್ ಚೌಧರಿ ಸಿಬ್ಬಂದಿಯೊಂದಿಗೆ ಆಗಮಿಸಿ ಪರಿಸ್ಥಿತಿಯನ್ನು ತಕ್ಷಣ ಹತೋಟಿಗೆ ತಂದರು. ಆ ವೇಳೆ ಮೊಸಿನ್ ಎಂಬ ವ್ಯಕ್ತಿ, ಎಸ್ಪಿ ಮೇಲೆ ಗುಂಡಿನ ದಾಳಿ ನಡೆಸಿ, ಸ್ಥಳದಿಂದ ಪರಾರಿಯಾಗಿದ್ದ. ದಾಳಿಯಲ್ಲಿ ಎಸ್ಪಿ ಸಿದ್ದಾರ್ಥ್ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದರು.
ಅಂದಿನಿಂದ ಪೊಲೀಸರು ಮೊಸಿನ್ಗಾಗಿ ಹುಡುಕಾಟ ನಡೆಸುತ್ತಿದ್ದರು. ಆರೋಪಿಯನ್ನು ಹುಡುಕಿಕೊಟ್ಟವರಿಗೆ ಹತ್ತು ಸಾವಿರ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದರು.ಈ ನೇಪಥ್ಯದಲ್ಲಿ ಖಾರ್ಗೋನ್ ಜಿಲ್ಲೆಯ ಕಾಸ್ರವಾಡ ಬಳಿ ಆರೋಪಿ ಮೋಸಿನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಹಿಂಸಾಚಾರಕ್ಕೆ ಕಾರಣರಾದ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.