ಹೊಸದಿಗಂತ ವರದಿ,ಮಂಗಳೂರು:
ನಗರದ ಚಿನ್ನಾಭರಣದ ಅಂಗಡಿಯೊಂದರ ಸಿಬ್ಬಂದಿಯನ್ನು ಫೆ.3ರಂದು ಮಧ್ಯಾಹ್ನ ಚೂರಿಯಿಂದ ಇರಿದು ಕೊಲೆಗೈದ ಆರೋಪಿಯನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ.
ಕೇರಳ ಮೂಲದ ಕೊಯಿಲಾಂಡಿಯ ಶಿಫಾಝ್ (33) ಎಂದು ಗುರುತಿಸಲಾಗಿದೆ. ಆದರೆ ಪೊಲೀಸರು ಇನ್ನಷ್ಟೇ ಖಚಿತಪಡಿಸಬೇಕಿದೆ.
ಹಂಪನಕಟ್ಟೆಯ ‘ಮಂಗಳೂರು ಜ್ಯುವೆಲ್ಲರ್ಸ್’ನಲ್ಲಿ ಕೆಲಸ ಮಾಡುತ್ತಿದ್ದ ಅತ್ತಾವರ ನಿವಾಸಿಯಾಗಿದ್ದ ರಾಘವೇಂದ್ರ ಆಚಾರ್ಯ (50) ರನ್ನು ಫೆ.3ರಂದು ಕೊಲೆ ಮಾಡಲಾಗಿತ್ತು.
ಆರೋಪಿ ಜ್ಯುವೆಲ್ಲರಿ ಅಂಗಡಿಗೆ ಆಗಮಿಸಿರುವ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಆರೋಪಿಯು ಚಿನ್ನಾಭರಣ ಕಳವು ಮಾಡುವುದಕ್ಕಾಗಿ ಅಂಗಡಿಗೆ ನುಗ್ಗಿರಬೇಕು ಎಂದು ಶಂಕಿಸಲಾಗಿತ್ತು. ಜ್ಯುವೆಲ್ಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದ್ದ ಚಿನ್ನಾಭರಣದಲ್ಲಿ ಕೆಲವು ನಾಪತ್ತೆಯಾಗಿತ್ತು ಎಂದು ಅಂಗಡಿ ಮಾಲಕರು ದೂರಿನಲ್ಲಿ ತಿಳಿಸಿದ್ದರು. ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿದ್ದರು. ಅಲ್ಲದೆ ಶಂಕಿತ ಆರೋಪಿಯ ಫೊಟೋವನ್ನು ಬಿಡುಗಡೆಗೊಳಿಸಿದ್ದರು. ಇದೀಗ ಕಾಸರಗೋಡು ಪೊಲೀಸರು ಕೇರಳ ಮೂಲದ ಕೊಯಿಲಾಂಡಿಯ ಶಿಫಾಝ್ (33) ಎಂಬಾತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಮಂಗಳೂರು ಪೊಲೀಸರು ಇನ್ನೂ ಇದನ್ನು ಅಧಿಕೃತಗೊಳಿಸಿಲ್ಲ.