ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ಬಿಕ್ಕಟ್ಟು ಜನಾಂಗೀಯ ಗುಂಪುಗಳ ನಡುವಿನ ಘರ್ಷಣೆಯಲ್ಲ. ಇದಕ್ಕೆ ನೆರೆಯ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮೂಲದ ಕುಕಿ ಉಗ್ರಗಾಮಿ ಗುಂಪುಗಳ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಯೇ ಕಾರಣ ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯವನ್ನು ವಿಘಟನೆ ಮಾಡಲು ಬಯಸುವ ಜನರ ಗುಂಪಿನಿಂದ ಅಶಾಂತಿ ಉಂಟಾಗಿದೆ. ಆದರೆ, ಈ ಬಿಕ್ಕಟ್ಟನ್ನು ಜನಾಂಗೀಯ, ಕೋಮುವಾದ, ಧಾರ್ಮಿಕ, ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಗುಂಪುಗಳ ನಡುವಿನ ಘರ್ಷಣೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಜನರ ಧ್ವನಿಯಿಂದ ಸಂಘರ್ಷಕ್ಕೆ ನಿಜವಾದ ಕಾರಣವೇನು ಎಂಬುದು ಹೊರಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೋಪಿಗಳ ಬಂಧನದ ಕುರಿತು ಕೇಂದ್ರ ತನಿಖಾ ಸಂಸ್ಥೆಯ ಹೇಳಿಕೆಗಳನ್ನು ಒತ್ತಿ ಹೇಳಿದ ಮುಖ್ಯಮಂತ್ರಿ, ಮಣಿಪುರದ ಬಿಕ್ಕಟ್ಟಿನ ಹಿಂದಿನ ಸ್ಪಷ್ಟ ಕಾರಣಗಳ ಬಗ್ಗೆ ಮಾತನಾಡಿದರು. ಈ ವಿಷಯವು ಭಾರತೀಯ ಒಕ್ಕೂಟದ ವಿರುದ್ಧದ ಯುದ್ಧವಾಗಿರುವುದರಿಂದ, ಅದನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದರು.
ಇಬ್ಬರು ವಿದ್ಯಾರ್ಥಿನಿಯರ ಹತ್ಯೆಗೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಅಪಹರಣಕ್ಕೊಳಗಾಗಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಜನರು ಕಾನೂನು ಪಾಲಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.
ಅದೇ ರೀತಿ ಪ್ರತಿಭಟನೆ, ಸಭೆ ಸಮಾರಂಭಗಳನ್ನು ನಡೆಸುವಾಗ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಜೊತೆಗೆ ಕಾನೂನು ಪಾಲಿಸುವಂತೆಯೂ ಅವರು ತಿಳಿಸಿದರು. ನಿಯಮಗಳನ್ನು ಪಾಲಿಸಿದರೆ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ತಪ್ಪು ತಿಳುವಳಿಕೆ ಮತ್ತು ಘರ್ಷಣೆಗಳನ್ನು ತಪ್ಪಿಸಬಹುದು ಎಂದು ಸಿಎಂ ಸಲಹೆ ನೀಡಿದರು.