ಹೊಸದಿಗಂತ ವರದಿ ಕಲಬುರಗಿ:
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ, ವಿಶೇಷವಾಗಿ ಕಲಬುರಗಿ ನಾಡಿನ ಜನರಿಗಾಗಿ ಮಣ್ಣೂರ ಆಸ್ಪತ್ರೆಯ ಜನಪರ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ನಗರದ ಬ್ಯಾರೆ ಹಿಲ್ದಲ್ಲಿರುವ ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜಿಲ್ಲೆಯಲ್ಲಿ ಮತ್ತು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಹಾಗೂ ಅವರ ಕುಟುಂಬದವರ ಸಲುವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಚಾಲನೆ ನೀಡಿ ಮಾತನಾಡಿದರು.
ಕೋವಿಡ್ ಸಮಯದಲ್ಲಿ 40 ಹಾಸಿಗೆಯುಳ್ಳ ಅತ್ಯುನ್ನತ ಬೆಡ್ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತಾ ಕಾರ್ಯ ಸೇರಿದಂತೆ ಹಲವು ಜನಪರವಾದ ಕಾರ್ಯಗಳನ್ನು ಮಣ್ಣೂರ ಆಸ್ಪತ್ರೆ ಮಾಡಿಕೊಂಡು ಬಂದಿದ್ದು, ನಿಜಕ್ಕೂ ಶ್ಲಾಘನೀಯ. ಸಾವಿರಾರು ಕುಟುಂಬಗಳ ಸೇವೆಗೆ ಪಾತ್ರವಾದ ಈ ಆಸ್ಪತ್ರೆ, ಪತ್ರಕರ್ತರ ಆರೋಗ್ಯದ ಬಗ್ಗೆ ಚಿಂತನೆ ಮಾಡಿ ಅವರಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ಕೆ ಅಭಿನಂದನೆಗಳು ಸಲ್ಲಿಸುತ್ತೇನೆ. ಪತ್ರಕರ್ತ ಬಾಂಧವರು ತಮ್ಮ ವೃತ್ತಿ ಜೀವನದ ಜೊತೆಗೆ ತಮ್ಮ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ಕೊಟ್ಟು,ಈ ಶಿಬಿರದ ಲಾಭ ಪಡೆದುಕೊಳ್ಳಲಿ ಎಂದು ಆಶಿಸಿದರು.