ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿ, ಆಡಳಿತ ಮತ್ತು ನಾಯಕತ್ವ ಗುಣವನ್ನು ಮೆಚ್ಚಿಕೊಂಡು ಕೇರಳ ರಾಜ್ಯದ ಅನೇಕ ಚರ್ಚ್ ಗಳು ಬಿಜೆಪಿಗೆ ಬೆಂಬಲವನ್ನು ಸೂಚಿಸುತ್ತಿವೆ ಎಂದು ಬಿಜೆಪಿ ಮುಖಂಡ ಅನಿಲ್ ಆ್ಯಂಟನಿ ಹೇಳಿದ್ದಾರೆ.
ಅವರು ಶುಕ್ರವಾರ, ಉಡುಪಿ ಜಿಲ್ಲಾ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಡಬಲ್ ಇಂಜಿನ್ ಸರಕಾರದ ಅಭಿವೃದ್ಧಿ ಕಾರ್ಯಗಳಿಂದ ಕರ್ನಾಟಕ ಸುಭದ್ರವಾಗಿದೆ. ಕೇಂದ್ರ ಸರಕಾರ ವಿನೂತನ ಯೋಜನೆಗಳ ಪ್ರಯೋಜನವನ್ನು ಕರ್ನಾಟಕದ ಜನತೆ ಪಡೆದಿದ್ದು, ರಾಜಧಾನಿ ಬೆಂಗಳೂರು ಏಷ್ಯಾದಲ್ಲೇ ಅತಿ ಹೆಚ್ಚು ಸ್ಟಾರ್ ಅಪ್ ಕಂಪೆನಿಗಳನ್ನು ಹೊಂದಿರುವ ನಗರವಾಗಿದೆ ಎಂದರು.
2014 ರಲ್ಲಿ ಮೋದಿಯವರು ಪ್ರಧಾನಿಯಾದ ನಂತರ 500 ರಷ್ಟಿದ್ದ ಸ್ಟಾರ್ಟ್ ಅಪ್ ಕಂಪೆನಿಗಳು ಸದ್ಯ 1 ಲಕ್ಷಕ್ಕೆ ಏರಿಕೆ ಕಂಡಿದೆ. ಇದರಿಂದಾಗಿ 40 ಲಕ್ಷ ಉದ್ಯೋಗ ಸೃಷ್ಟಿಯಾಗಿದ್ದು, ಆರ್ಥಿಕತೆಯಲ್ಲಿ ಮೂರನೇ ಸ್ಥಾನವನ್ನು ಹೊಂದಿದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದರೆ, ಈ ರಾಜ್ಯವನ್ನು ಎ.ಟಿ.ಎಮ್ ಮಾಡಿಕೊಳ್ಳುವ ಹುನ್ನಾರವನ್ನು ನಡೆಸಿದೆ. ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಜೊತೆ ಸೇರಿ ಬಜರಂಗದಳ ನಿಷೇಧ ಎಂದು ಕಾಂಗ್ರೆಸ್ ಪ್ರಣಾಳಿಕೆ ತಯಾರಿಸಿದೆ ಎಂದು ಆರೋಪಿಸಿದರು.
ದಿ ಕೇರಳ ಸ್ಟೋರಿ ಸಿನೆಮಾದ ಬಗ್ಗೆ ಪ್ರತಿಕ್ರಿಯಿಸಿದ ಅನಿಲ್ ಆ್ಯಂಟನಿ, ಈ ಹಿಂದೆ ಬಿಬಿಸಿಯವರು ಮಾಡಿದ್ದ ಡೊಕ್ಯೂಮೆಂಟರಿಯನ್ನು ಪ್ರಸಾರ ಮಾಡಲು ಕಾಂಗ್ರೆಸ್ ಮತ್ತು ಸಿಪಿಎಮ್ ಉತ್ಸಾಹ ತೋರಿಸಿದ್ದರು. ಆದರೆ ಈಗ ಮಾತ್ರ ವಿರೋಧ ಮಾಡುತ್ತಿದ್ದಾರೆ. ಸತ್ಯ ಯಾವತ್ತೂ ಕಹಿಯಾಗಿರುತ್ತದೆ. ದಿ ಕೇರಳ ಸ್ಟೋರಿ ಸಿನೆಮಾವು ಕೇರಳದಲ್ಲಿನ ಲವ್ ಜಿಹಾದ್ ನ ಕರಾಳತೆಯನ್ನು ಜಗ್ಗತ್ತಿನ ಮುಂದೆ ಅನಾವರಣಗೊಳಿಸಿದೆ ಎಂದರು.