ಹೊಸದಿಗಂತ ವರದಿ ಮಡಿಕೇರಿ:
ದಾಂಪತ್ಯ ಕಲಹಕ್ಕೆ ಬೇಸತ್ತ ಕಾರ್ಮಿಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೆ, ಆತನ ಪತ್ನಿ ಕೂಡಾ ಅದೇ ಕೆರೆಗೆ ಧುಮಿಕಿ ಸ್ಥಳೀಯರ ನೆರವಿನಿಂದ ಬಚಾವ್ ಆಗಿರುವ ಘಟನೆ ನಡೆದಿದೆ.
ಇಲ್ಲಿಗೆ ಸಮೀಪದ ಹೊರೂರು ಗ್ರಾಮದ ಸಂಜು ಪೊನ್ನಪ್ಪ ಅವರ ತೋಟದ ಕಾರ್ಮಿಕರಾಗಿರುವ ವಿಜಯ್ (32) ಮತ್ತು ಸೌಮ್ಯ (29) ದಂಪತಿಯ ನಡುವೆ ಭಾನುವಾರ ಮಧ್ಯಾಹ್ನ ಕಲಹ ಏರ್ಪಟ್ಟಿತ್ತೆನ್ನಲಾಗಿದೆ. ಇದರಿಂದ ಬೇಸತ್ತ ವಿಜಯ್ ಆತ್ಮಹತ್ಯೆ ಮಾಡಿಕೊಳ್ಳಲೆಂದು ತೋಟದ ಕೆರೆಗೆ ಹಾರಿದ್ದಾರೆ. ತನ್ನೆದುರೇ ಗಂಡ ಕೆರೆಗೆ ಹಾರಿದ್ದನ್ನು ಗಮನಿಸಿದ ಸೌಮ್ಯ ಕೂಡ ನೀರಿಗೆ ಜಿಗಿದಿದ್ದಾರೆ. ಸಕಾಲದಲ್ಲಿ ಸ್ಥಳೀಯರು ಜಲಸಮಾಧಿಯಾಗಲಿದ್ದ ಸೌಮ್ಯಳನ್ನು ದಡಕ್ಕೆ ಸೇರಿಸಿ ಜೀವ ಉಳಿಸಿದ್ದಾರೆ. ಆದರೆ ವಿಜಯ್ ನೀರಿನಲ್ಲಿಯೇ ಉಸಿರು ಚೆಲ್ಲಿದ್ದಾರೆ. ಸಂಜೆಯವರೆಗೆ ಹುಡುಕಾಟ ನಡೆಸಿದರೂ ಮೃತ ದೇಹ ಪತ್ತೆಯಾಗಿಲ್ಲ. ಈ ದಂಪತಿಗೆ 5 ತಿಂಗಳ ಮಗುವಿದ್ದು, ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಯಲ್ಲಿ ಪುರುಷನ ಮೃತದೇಹ ಪತ್ತೆ
ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಬಾವಿಯಲ್ಲಿ ಪುರುಷನ ಮೃತದೇಹ ಪತ್ತೆಯಾಗಿದೆ. ಕಲ್ಲುಕೋರೆಯಲ್ಲಿ ವಾಸಿಸುತ್ತಿದ್ದ ರವಿ ಎಂಬವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಈ ಬಾವಿಯಲ್ಲಿ ಕಂಡು ಬಂದಿರುವ ಮೃತ ದೇಹ ಅವರದ್ದಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.