ಹೊಸದಿಗಂತ ವರದಿ ಮಡಿಕೇರಿ:
ವಿವಾಹವಾಗಲು ಪ್ರಿಯಕರ ವಿಳಂಬ ಮಾಡಿದನೆಂಬ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾ.ಪಂ ವ್ಯಾಪ್ತಿಯ ಮಾರುತಿ ಬಡಾವಣೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಳ್ಳುಸೋಗೆ ಗ್ರಾ. ಪಂ.ಅಧ್ಯಕ್ಷರ ಪುತ್ರನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಮುಳ್ಳುಸೋಗೆಯ ಮಾರುತಿ ಬಡಾವೇ ನಿವಾಸಿ ಕಾಂತರಾಜು ಅವರ ಸಾಕು ಪುತ್ರಿ ಲ್ಯಾನ್ಸಿ (21) ಎಂಬಾಕೆಯೇ ಆತ್ಮಹತ್ಯೆಗೆ ಶರಣಾದವರು. ಲ್ಯಾನ್ಸಿ ಹಾಗೂ ಮುಳ್ಳುಸೋಗೆ ಗ್ರಾಪಂ ಅಧ್ಯಕ್ಷ ಚೆಲುವರಾಜು ಅವರ ಪುತ್ರ ಕುಮಾರ ಎಂಬವರು ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದ್ದು, ಕುಮಾರ್ ಕೂಡಾ ಲ್ಯಾನ್ಸಿಯನ್ನು ಮದುವೆಯಾಗುವ ಭರವಸೆ ನೀಡಿದ್ದನೆಂದು ಹೇಳಲಾಗಿದೆ. ಆದರೆ ಈ ದಿಸೆಯಲ್ಲಿ ವಿಳಂಬ ಮಾಡುತ್ತಿದ್ದ ಎನ್ನಲಾಗಿದೆ.
ಸೋಮವಾರ ಕೂಡಾ ಕುಮಾರ, ಕಾಂತರಾಜು ಅವರ ಪತ್ನಿಗೆ ಕರೆ ಮಾಡಿ ಲ್ಯಾನ್ಸಿ ಬಗ್ಗೆ ವಿಚಾರಿಸಿದ್ದ. ಆದರೆ ಸಂಜೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಕುಮಾರನೇ ಕಾರಣ ಎಂದು ಡೆತ್ ನೋಟ್ ಬರೆದಿರುವುದಾಗಿ ಹೇಳಲಾಗಿದೆ. ಈ ಸಂಬಂಧ ಯುವಕನ ವಿರುದ್ಧ ಕ್ರಮಕೈಗೊಳ್ಳುವಂತೆ ಯುವತಿ ತಂದೆ ಕಾಂತರಾಜು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.