ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನ ಸೋಂತಿಪುರ್ ಜಿಲ್ಲೆಯ ಬ್ರಹ್ಮಪುತ್ರ ನದಿಯ ಉತ್ತರ ದಡದಲ್ಲಿ ಬೃಹತ್ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಬ್ರಹ್ಮಪುತ್ರ ನದಿಯ ಉತ್ತರ ದಡದಲ್ಲಿರುವ ಬರ್ಚಲ್ಲಾದ ಚಿಟಲ್ಮರಿ ಪ್ರದೇಶದಲ್ಲಿ 330 ಎಕರೆ ಭೂಮಿಯನ್ನು ತೆರವುಗೊಳಿಸಲು ಉದ್ದೇಶಿಸಲಾಗಿದ್ದು ಭಾರೀ ಯಂತ್ರೋಪಕರಣಗಳು ಸೇರಿದಂತೆ ಹೆಲವು ಕಾರ್ಮಿಕರಿಂದ ತೆರವು ಕಾರ್ಯ ನಡೆಯುತ್ತಿದೆ.
ತೆರವುಗೊಳಿಸುವ ಕುರಿತು ಸರ್ಕಾರವು ಈ ಹಿಂದೆಯೇ ಸೂಚನೆ ನೀಡಿತ್ತು. ಹಲವಾರು ಅಕ್ರಮ ನಿವಾಸಿಗಳು ಮನೆ ತೊರೆದು ಜಾಗ ಖಾಲಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ಪ್ರತಿಭಟನೆಗಳಿಲ್ಲದೇ ತೆರವು ಕಾರ್ಯ ಶಾಂತಿಯುತವಾಗಿ ನಡೆಯುತ್ತಿದೆ.
ಅಸ್ಸಾಂ ಪೊಲೀಸರು ಮತ್ತು ಪ್ಯಾರಾ ಮಿಲಿಟರಿ ಪಡೆಗಳು ಸೇರಿದಂತೆ ಸುಮಾರು 1,200 ಭದ್ರತಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಗಲಭೆ ನಿಗ್ರಹ ಸಾಧನಗಳನ್ನು ಅಳವಡಿಸಲಾಗಿದೆ. ಸರ್ಕಾರಿ ದಾಖಲೆಗಳ ಪ್ರಕಾರ, 299 ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿವೆ, ಆದರೆ ಅವರಲ್ಲಿ 90% ಕ್ಕಿಂತ ಹೆಚ್ಚು ಜನರು ಸುಮಾರು ಎಂಟು ತಿಂಗಳ ಹಿಂದೆ ನೋಟಿಸ್ ಸ್ವೀಕರಿಸಿದ ನಂತರ ಈಗಾಗಲೇ ತೊರೆದಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಆದರೆ, ಸರಕಾರದಿಂದ ಯಾವುದೇ ಪುನರ್ವಸತಿ ಕಲ್ಪಿಸಿಲ್ಲ ಎಂದು ನಿವಾಸಿಗಳು ದೂರಿದ್ದಾರೆ ಎನ್ನಲಾಗಿದೆ. ಬ್ರಹ್ಮಪುತ್ರದ ದಕ್ಷಿಣ ದಡದಲ್ಲಿ ಸವೆತದ ನಂತರ ಸ್ಥಳೀಯರು ನಾಗಾವ್ ಮತ್ತು ಮೊರಿಗಾಂವ್ ಜಿಲ್ಲೆಗಳಿಂದ ಈ ಪ್ರದೇಶಕ್ಕೆ ವಲಸೆ ಬಂದಿದ್ದರು, ಪ್ರಸ್ತುತ ಸೋಲಾರ್ ಪವರ್ ಪ್ಲ್ಯಾಂಟ್ ನಿರ್ಮಾಣಕ್ಕಾಗಿ ತೆರವು ಕಾರ್ಯ ನಡೆಸಲಾಗುತ್ತಿದೆ ಎಂದು ಮೂಲಗಳು ಉಲ್ಲೇಖಿಸಿವೆ.