ಹೊಸದಿಗಂತ ವರದಿ ಶಿರಸಿ :
ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ವಿಧಾನ ಸಭಾ ಅಧಿವೇಶನದಲ್ಲಿ ಜಿಲ್ಲೆ ಘೋಷಣೆ ಮಾಡುವಂತೆ ಒತ್ತಾಯಿಸಲಾಯಿತು.
ಶನಿವಾರ ನಗರದ ಹಳೆ ಬಸ್ ನಿಲ್ದಾಣ ಸರ್ಕಲ್ ನಿಂದ ಆರಂಭವಾದ ಪ್ರತಿಭಟನಾ ರ್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು, ವಿದ್ಯಾರ್ಥಿಗಳು ಆಗಮಿಸಿ ಶಿರಸಿ ಜಿಲ್ಲೆಗಾಗಿ ಹಕ್ಕೊತ್ತಾಯ ಮಾಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾ ರ್ಯಾಲಿ ಶಿರಸಿ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲೆ ಘೋಷಣೆ ಮಾಡುವಂತೆ ಮನವಿ ಸಲ್ಲಿಸಲಾಯಿತು.
ಈ ವೇಳೆಯಲ್ಲಿ ನಗರದ ಝೂ ಸರ್ಕಲ್ ಬಳಿ ಟೈರ್ ಗೆ ಬೆಂಕಿ ಹಚ್ಚಲಾಯಿತು. ಪಕ್ಷಾತೀತವಾಗಿ ನಡೆದ ರ್ಯಾಲಿಯಲ್ಲಿ ಯಾವುದೇ ಕಾರಣಕ್ಕೂ ಶಿರಸಿ ಜಿಲ್ಲೆ ಘೋಷಣೆ ಮಾಡಬೇಕೆಂಬ ಕೂಗು ಪ್ರತಿಭಟನೆಯುದ್ದಕೂ ಮಾರ್ಧನಿಸಿತು. ಈ ವೇಳೆ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ, ಎಂ ಎಂ ಭಟ್ಟ, ಸದಾನಂದ ಭಟ್ಟ ರಘು ಕಾನಡೆ, ಪರಮಾನಂದ ಹೆಗಡೆ, ವೀಣಾ ಶೆಟ್ಟಿ, ಭೀಮಣ್ಣ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.