ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಸರ್ಕಾರ ರಚನೆಯಾದ ಬೆನ್ನಲ್ಲೇ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆಯನ್ನು ದಲಿತರು ಮತ್ತು ಅಲ್ಪಸಂಖ್ಯಾತರಿಗೆ ನೀಡಿಲ್ಲ, ವಾಸ್ತವವಾಗಿ ಈ ಎರಡು ಗುಂಪಿನ ಮತಗಳಿಂದಲೇ ಕಾಂಗ್ರೆಸ್ ಪಕ್ಷ ಗೆದ್ದಿದೆ ಎಂದು ಹರಿಹಾಯ್ದರು. ಕಾಂಗ್ರೆಸ್ ಪಕ್ಷದ ಜಾತಿವಾದಿ ಮನಸ್ಥಿತಿಯ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂಬ ಕಿವಿಮಾತನ್ನು ಹೇಳಿದರು.
ಶನಿವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ ಮಾಯಾವತಿ, ”ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಆಂತರಿಕ ಕಲಹವನ್ನು ಹತ್ತಿಕ್ಕಲು ಪ್ರಯತ್ನಿಸಿತು. ಆದರೆ ಸಚಿವ ಸಂಪುಟದಲ್ಲಿ ಡಿಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಮಾಡಲಾಯಿತು. ದಲಿತರು ಮತ್ತು ಮುಸ್ಲಿಮರನ್ನು ಕಡೆಗಣಿಸಲಾಗಿದೆ. ವಾಸ್ತವವಾಗಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಕ್ಕಿದ್ದು ಈ ಎರಡು ಗುಂಪಿನ ಮತಗಳಿಂದ. ಕರ್ನಾಟಕದಲ್ಲಿ ಸಿಎಂ ಸ್ಥಾನಕ್ಕಾಗಿ ದಲಿತ ಸಮುದಾಯಗಳು ಎತ್ತಿರುವ ವಾದವನ್ನು ಕಾಂಗ್ರೆಸ್ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಈಗ ಅವರನ್ನು ಉಪ ಮುಖ್ಯಮಂತ್ರಿಯಾಗಿ ತೆಗೆದುಕೊಂಡಿಲ್ಲ. ಇದು ಕಾಂಗ್ರೆಸ್ನ ಜಾತಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದರು ಬರೆದಿದ್ದಾರೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆಗಳಲ್ಲಿ ದಲಿತರು, ಅಲ್ಪಸಂಖ್ಯಾತರಿಗೆ ಸ್ಥಾನ ಸಿಗದಿದ್ದರೂ ಹೊಸದಾಗಿ ರಚನೆಯಾದ ಎಂಟು ಜನ ಸಚಿವ ಸಂಪುಟದಲ್ಲಿ ಆದ್ಯತೆ ನೀಡಲಾಗಿದೆ. ಅದರಲ್ಲಿ ಜಿ.ಪರಮೇಶ್ವರ್ (ಎಸ್ಸಿ), ಕೆ.ಎಚ್.ಮುನಿಯಪ್ಪ (ಎಸ್ಸಿ), ಕೆಜೆ ಜಾರ್ಜ್ (ಅಲ್ಪಸಂಖ್ಯಾತ-ಕ್ರಿಶ್ಚಿಯನ್), ಎಂ.ಬಿ.ಪಾಟೀಲ್ (ಲಿಂಗಾಯತ), ಸತೀಶ್ ಜಾರಕಿಹೊಳಿ (ಎಸ್ಟಿ-ವಾಲ್ಮೀಕಿ), ಪ್ರಿಯಾಂಕ್ ಖರ್ಗೆ (ಎಸ್ಸಿ), ರಾಮಲಿಂಗಾ ರೆಡ್ಡಿ (ರೆಡ್ಡಿ), ಬಿಜೆಡ್ ಜಮೀರ್ ಅಹ್ಮದ್ ಖಾನ್ (ಅಲ್ಪಸಂಖ್ಯಾತ- ಮುಸ್ಲಿಂ) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.